ಮೈಸೂರು: ಮುಂಜನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಸಂಬಂಧ ಜೆಡಿಎಸ್ ಕಾರ್ಯಕರ್ತರು ಹಾಗೂ ಮಂಡ್ಯ ಸಂಸದೆ ಸುಮಲತಾ ಬೆಂಬಲಿಗರ ಮಧ್ಯೆ ಘರ್ಷಣೆ ಉಂಟಾಗಿದೆ. ಈ ಸಂದರ್ಭದಲ್ಲಿ ಸುಮಲತಾ ಅವರ ಕಾರು ಚಾಲಕನ ಮೇಲೆ ಹಲ್ಲೆ ನಡೆದಿದೆ.
ಮುಂಜನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ವೇಳೆ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಅನುಪಸ್ಥಿತಿಯಲ್ಲಿ ಭೂಮಿಪೂಜೆ ನೆರವೇರಿಸಬಾರದು ಎಂದು ಜೆಡಿಎಸ್ ಕಾರ್ಯಕರ್ತರು ಸುತ್ತುವರೆದು ಘೋಷಣೆ ಕೂಗಿದರು. ಆದರೆ ಸುಮಲತಾ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದು ಸಂಸದರ ನಿಧಿಯಿಂದ ಮಾಡುತ್ತಿರುವ ಕಾಮಗಾರಿ. ಹೀಗಾಗಿ ಶಾಸಕರು ಇಲ್ಲದೆಯೂ ಭೂಮಿಪೂಜೆ ನೆರವೇರಿಸಬಹುದು ಎಂದು ಹೇಳಿದಾಗ ಘರ್ಷಣೆ ಆರಂಭವಾಗಿತ್ತು.
ಸಂಸದೆ ಸುಮಲತಾ ಅವರು ಭೂಮಿ ಪೂಜೆ ನೆರವೇರಿಸಲು ಮುಂದಾಗುತ್ತಿದ್ದಂತೆ ಗುಂಪೊಂದು ಸುಮಲತಾ ಕಾರಿನ ಚಾಲಕ ನಂಜುಂಡ ಎಂಬುವವರನ್ನು ಥಳಿಸಿತು. ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಿದರು. ಗಾಯಗೊಂಡ ನಂಜುಂಡ ಅವರನ್ನು ಕೆ.ಆರ್. ನಗರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಕೆಲವು ಮಹಿಳೆಯರು ಕಾಮಗಾರಿಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಸುಮಲತಾ ಅವರ ಬೆಂಬಲಕ್ಕೆ ನಿಂತರು.
ಈ ಸಂಬಂಧ ಸಂಸದೆ ಸುಮಲತಾ ಅಂಬರೀಶ್, ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ಕಾರ್ಯಕರ್ತರಾದ ಅನೀಫ್ ಗೌಡ, ಧನು ಸೇರಿದಂತೆ 7 ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಒದಿ: 'ಅಧಿಕಾರಿಗಳಿಂದ ಅಗೌರವ': ಗುದ್ದಲಿ ಪೂಜೆ ಮಾಡದೆ ವಾಪಸಾದ ಸುಮಲತಾ ಅಂಬರೀಶ್