ಮೈಸೂರು:ನೆರೆ ಪರಿಹಾರ ವಿಚಾರದಲ್ಲಿ ರಾಜ್ಯದ ವಿರೋಧ ಪಕ್ಷದವರು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂಪನ್ಮೂಲ ಕ್ರೂಢೀಕರಿಸಿ ಕೇಂದ್ರ ನೀಡಿದ ಪರಿಹಾರದ ಜೊತೆ ಹೆಚ್ಚಿನ ಹಣವನ್ನು ಪಾರದರ್ಶಕವಾಗಿ ನಿರಾಶ್ರಿತರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ನಿರಾಶ್ರಿತರು ಆತಂಕ ಪಡುವ ಪ್ರಮೇಯವಿಲ್ಲ. ತಾತ್ಕಾಲಿಕ ತೊಂದರೆ ಇದ್ದರೂ ಶಾಶ್ವತವಾಗಿ ಸಮಸ್ಯೆಗಳನ್ನು ಪರಿಹರಿಸಲಿದ್ದೇವೆ ಎಂದರು.
ಕೇಂದ್ರ ಸರ್ಕಾರ ರಾಜ್ಯಸರ್ಕಾರಕ್ಕೆ ಕೂಡಲೇ ಎರಡನೇ ಹಂತದ ಪರಿಹಾರ ನೀಡಲಿದೆ. ಈಗಾಗಲೇ ಕೇಂದ್ರವು ಮೊದಲ ಹಂತದಲ್ಲೇ ₹ 12O0 ಕೋಟಿ ಹಣ ನೀಡಿದೆ. ಅದನ್ನ ರಾಜ್ಯ ಸರ್ಕಾರ ನಿರಾಶ್ರಿತರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸಚಿವರು, ಸಂಸದರು ಹಾಗೂ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಒತ್ತಡ ತಂದು ಎರಡನೇ ಹಂತದ ಹಣ ಬಿಡುಗಡೆ ಮಾಡಿಸುತ್ತೇವೆ ಎಂದರು. ಮಹಾರಾಷ್ಟ್ರ ಹಾಗೂ ಹರಿಯಾಣ ಸೇರಿ ಎಲ್ಲಾ ಉಪ ಚುನಾವಣೆಗಳಲ್ಲೂ ಬಿಜೆಪಿ ಭರ್ಜರಿ ಗೆಲುವು ದಾಖಲಿಸಲಿದೆ ಎಂದು ಎಲ್ಲಾ ಸಮೀಕ್ಷೆಗಳು ತಿಳಿಸಿವೆ. ಈ ಫಲಿತಾಂಶದಿಂದ ಬಿಜೆಪಿ ದೇಶದಲ್ಲಿ ಮತ್ತಷ್ಟು ಗಟ್ಟಿಗೊಳ್ಳಲಿದೆ. ಈ ಫಲಿತಾಂಶವು ದೇಶದ ಜನರ ಭಾವನೆಯಲ್ಲಿ ಬಿಜೆಪಿ ಸ್ಥಾನವನ್ನು ಸ್ಪಷ್ಟಪಡಿಸುತ್ತಿದೆ ಎಂದು ತಿಳಿಸಿದರು.