ಮೈಸೂರು: ಥಾಮಸ್ ಮೆಕಾಲೆ ಪ್ರೇರಿತದ ಶಿಕ್ಷಣ ನೀತಿ ಭಾರತದ ಜ್ಞಾನ ವಿಜ್ಞಾನದ ಮೇಲೆ ಬೆಳಕು ಚೆಲ್ಲುವುದರಲ್ಲಿ ವಿಫಲವಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.
ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ ಮುದ್ರಿಸಿರುವ ‘ಆರ್ಕಲಾಜಿಕಲ್ ಎಕ್ಸಕೇವಿಶನ್ ಅಟ್ ತಲಕಾಡು ವಾಲ್ಯೂಂ -2, ಬುದ್ದಿಸ್ಟ್ ಆರ್ಟ್ ಆ್ಯಂಡ್ ಕಲ್ಚರ್ ಇನ್ ಕರ್ನಾಟಕ, ಹಂಪಿ ಸ್ಪ್ಲೆಂಡರ್ ದಟ್ ವಾಸ್, ಮೈಸೂರು ದಸರಾ ದಿ ಸ್ಟೇಟ್ ಫೆಸ್ಟಿವಲ್, ಕರ್ನಾಟಕ ಎ ಗಾರ್ಡನ್ ಆಫ್ ಆರ್ಕಿಟೆಕ್ಚರ್’ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೆಕಾಲೆ ಶಿಕ್ಷಣ ನೀತಿ ಭಾರತೀಯರ ಶೌರ್ಯದ ಯಶೋಗಾಥೆ ತಿಳಿಸುವ ಪ್ರಯತ್ನ ಮಾಡಿಲ್ಲ. ಆದರೂ ಈ ಬಗೆಯ ಶಿಕ್ಷಣ ವ್ಯವಸ್ಥೆಯನ್ನೇ ನಾವು ಇಂದಿಗೂ ಅನುಸರಿಸುತ್ತಿದ್ದೇವೆ ಎಂದರು.
ನಾಗರಿಕತೆಯ ಜ್ಞಾನ ಹಾಗೂ ವಿಜ್ಞಾನ ಐರೋಪ್ಯರಿಂದ ಬಂದ ಬಳುವಳಿ ಎಂಬ ಭ್ರಮೆಯಲ್ಲಿದ್ದೇವೆ. ನಮ್ಮ ಪೂರ್ವಿಕರು ಕಟ್ಟಿದ ದೇವಾಲಯಗಳು, ಪ್ರವಾಹ ತಡೆಗೋಡೆ, ಬೇಲೂರು, ಬಾದಾಮಿ, ಐಹೊಳೆ ಪಟ್ಟದ ಕಲ್ಲಿನ ಶಿಲೆಗಳು ನಮ್ಮ ಪೂರ್ವಜರ ವಿಜ್ಞಾನಕ್ಕೆ ಸಾಕ್ಷಿಗಳಾಗಿವೆ. ವಾಸ್ತವಿಕ ನೆಲೆಗಟ್ಟಿನಲ್ಲಿ ಸತ್ಯದ ಇತಿಹಾಸ ಅರಿಯುವ ಕೆಲಸವಾದಾಗ ಮಾತ್ರ ಸುಳ್ಳಿನಿಂದ ಕಟ್ಟಿದ ಇತಿಹಾಸ ನಶಿಸಿ ಹೋಗುತ್ತದೆ. ಹಾಗಾಗಿ ವಾಸ್ತವತೆ ತಿಳಿಸುವ ಸಂಶೋಧನೆಯು ವರ್ತಮಾನ ಹಾಗೂ ಭವಿಷ್ಯದ ಪೀಳಿಗೆಗೆ ಅವಶ್ಯಕ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಹಾಗೂ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.