ಮೈಸೂರು : ಸುಮಲತಾ ಅವರು ಚುನಾವಣಾ ಪ್ರಚಾರಕ್ಕೆ ಕರೆದಿಲ್ಲ, ಒಂದು ವೇಳೆ ಕರೆದರೂ ನಾನು ಹೋಗುವುದಿಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ನಿಲುವು ಸ್ಪಷ್ಟ ಪಡಿಸಿದ್ದಾರೆ.
ನಿನ್ನೆ ತಮ್ಮ ಕವಚ ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಿವಣ್ಣ, ರಾಜಕೀಯ ನಮಗೆ ಗೊತ್ತಿಲ್ಲ. ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರ ಚುನಾವಣಾ ಪ್ರಚಾರಕ್ಕೂ ನಾನು ಹೋಗುವುದಿಲ್ಲ. ನನ್ನ ಪತ್ನಿ ಗೀತಾ ಹೋದರೂ ಹೋಗಬಹುದು. ಯಾಕಂದ್ರೇ, ಮಧು ಅವಳ ಸಹೋದರ ಅಲ್ವಾ ಎಂದರು. ಮಧು ಕೂಡ ನೀವು ಬರಬೇಡಿ ಎಂದಿದ್ದಾರೆ. ಗೊತ್ತಿಲ್ಲದ ಕೆಲಸಕ್ಕೆ (ರಾಜಕೀಯ ) ಕೈ ಹಾಕಬಾರದು ಎಂದು ಶಿವಣ್ಣ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಮೊನ್ನೆಯಷ್ಟೆ ನಟ ಪುನೀತ್ ರಾಜಕುಮಾರ್ ಕೂಡ ತಾವು ಯಾರ ಪರನೂ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದರು. ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಅವರು, ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಹಾಗೂ ನಿಖಿಲ್ ಗೌಡ ಅವರು ನಮ್ಮ ಕುಟುಂಬಕ್ಕೆ ಆಪ್ತರು. ಅವರಿಬ್ಬರಿಗೂ ಒಳ್ಳೆಯದಾಗಲಿ ಎಂದು ದೊಡ್ಮನೆ ರಾಜಕುಮಾರ ಹರಸಿದ್ದರು. ಈಗ ಶಿವಣ್ಣ ಕೂಡ ತಮ್ಮನ ಹಾದಿಯನ್ನೇ ಅನುಸರಿಸಿದ್ದಾರೆ.