ಮೈಸೂರು: ನಮ್ಮ ನಾಡಿನ ನದಿಗಳನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಕಾವೇರಿ, ಕಬಿನಿ ಮತ್ತು ಲಕ್ಷ್ಮಣತೀರ್ಥ ನೀರಿನ ಸಂರಕ್ಷಣೆ ಬಗ್ಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ನದಿಗಳು ಇಲಾಖೆಗಳ ಬೇಜವಾಬ್ದಾರಿತನದಿಂದ ಮಾಲಿನ್ಯವಾಗುತ್ತಿವೆ. ನದಿಗಳು ಮಲಿನವಾಗಲು ಕಾರಣ ಏನು? ಅದಕ್ಕೆ ಇಲಾಖೆಗಳು ತೆಗೆದುಕೊಂಡಿರುವ ಕ್ರಮಗಳೇನು? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಕಾವೇರಿ ನದಿಗೆ ಕಲುಷಿತ ನೀರು ಹೋಗದಂತೆ ತಡೆಯಬೇಕು ಹಾಗೂ ನದಿ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ ಹಾಗೂ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಒಂದು ಬಾರಿ ತಿಳುವಳಿಕೆ ನೀಡುತ್ತೇವೆ, ಎಚ್ಚೆತ್ತುಕೊಳ್ಳದಿದ್ದರೆ ಪರಿಸರ ಮಾಲಿನ್ಯ ನಿಯಂತ್ರಣದ ಕಾನೂನಿನಡಿಯಲ್ಲಿ ನೋಟಿಸ್ ಬಂದರೆ, ಅದಕ್ಕೆ ನೀವೇ ಜವಾಬ್ದಾರರಾಗುವಿರಿ ಎಂದರು.
ಲ್ಯಾಂಡ್ ಫಿಲ್ಲಿಂಗ್ ಮಾಡುವುದರಿಂದ ಅಂತರ್ಜಲ ಕಲುಷಿತವಾಗಲಿದ್ದು, ಇದರಿಂದ ಬೋರ್ವೆಲ್ ನೀರು ಕೂಡ ಕಲುಷಿತವಾಗುತ್ತದೆ. ಇದು ಮುಂದಿನ ಪೀಳಿಗೆಗೆ ಮಾರಕವಾಗಲಿದೆ. ಲ್ಯಾಂಡ್ ಫಿಲ್ಲಿಂಗ್ ಬದಲು ನೀರನ್ನು ಶುದ್ದಿಕರಿಸಿ ಮತ್ತು ಎಸ್.ಟಿ.ಪಿ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಓದಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್: 24 ಗಂಟೆಯೊಳಗೆ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ಚಿತ್ರಣ..
ಮೂರು ತಿಂಗಳ ನಂತರ ಇನ್ನೊಮ್ಮೆ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು. ಅಷ್ಟರೊಳಗೆ ಯಾವುದೇ ಕಾರಣಕ್ಕೂ ಯಾವುದೇ ಸಬೂಬುಗಳನ್ನು ಹೇಳದೆ ಮಲಿನ ನೀರು ನದಿ ಸೇರುವುದನ್ನು ನಿಲ್ಲಿಸಬೇಕು ಎಂದು ಖಡಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲ್, ಪುರಾತತ್ತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಯ ಆಯುಕ್ತರಾದ ಬಿ.ಆರ್.ಪೂರ್ಣಿಮಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.