ಮಂಡ್ಯ: ಜಿಲ್ಲೆಯಲ್ಲಿ ಸುಮಲತಾ ಅಂಬರೀಶ್ ಮತ ಬೇಟೆ ಜೋರಾಗಿದೆ. ಅವರು ಹೋದ ಕಡೆ ಜನಸಾಗರ ಹರಿದು ಬರುತ್ತಿದೆ. ಇಂದು ಕೆ.ಆರ್. ಪೇಟೆ ತಾಲೂಕಿನ ಐಕನಹಳ್ಳಿ, ಬೂಕನಕೆರೆ, ಬಲ್ಲೇನಹಳ್ಳಿ, ಮಾಕವಳ್ಳಿ, ಅಕ್ಕಿ ಹೆಬ್ಬಾಳು ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಲತಾ ಪ್ರಚಾರ ಕೈಗೊಂಡಿದ್ದಾರೆ.
ಪ್ರಚಾರದ ಮಧ್ಯೆ ಸುಮಲತಾ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಹುಟ್ಟೂರಿಗೆ ತೆರಳಿದ್ದ ಅವರು, ಯಡಿಯೂರಪ್ಪ ಮನೆ ದೇವರು ಗೊಗಲಮ್ಮ ದೇವಿಗೆ ಪೂಜೆ ಸಲ್ಲಿಸಿದರು. ಗೋಗಲಮ್ಮ ಬಿಎಸ್ವೈ ಕುಟುಂಬದ ಮನೆ ದೇವತೆ. ಜೊತೆಗೆ ಬೂಕನಕೆರೆ ಗ್ರಾಮ ದೇವತೆಯಾಗಿದ್ದು, ವಿಶೇಷ ಪೂಜೆ ಸಲ್ಲಿಸಿದರು.
ಆಶೀರ್ವಾದದ ನಂತರ ಅವರ ಹೆಸರಿನ ಮಹಿಳೆ ನಾಮಪತ್ರ ಸಲ್ಲಿಸಿರುವ ಸುಮಲತಾ ಪತಿ ಮಂಜೇಗೌಡ ನಟಿ ಸುಮಲತಾರನ್ನು ಭೇಟಿಯಾಗಿ ಶುಭಾಶಯ ತಿಳಿಸಿದರು. ಜೊತೆಗೆ ತನಗೆ ಗೊತ್ತಿಲ್ಲದೆ ಪತ್ನಿಯನ್ನು ನಾಮಪತ್ರ ಸಲ್ಲಿಸಲು ಕರೆದೊಯ್ಯಲಾಗಿತ್ತು. ನಾಳೆ ನಾಮಪತ್ರ ವಾಪಸ್ ಪಡೆದು ಸುಮಲತಾ ಅಂಬರೀಶ್ಗೆ ಬೆಂಬಲ ಘೋಷಿಸುವುದಾಗಿ ತಿಳಿಸಿದರು. ಜೊತೆಗೆ ತಾವು ದರ್ಶನ್ ಅಭಿಮಾನಿಯಾಗಿದ್ದೇನೆ. ಹಾಗಾಗಿ ಬೆಂಬಲ ನೀಡುವೆ ಎಂದರು.
ಇನ್ನು ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಅಂಬರೀಶ್, ಮೂರು ಮಂದಿಯಲ್ಲ, ನೂರು ಮಂದಿ ಕರೆದುಕೊಂಡು ಬಂದು ನಿಲ್ಲಿಸಲಿ ಸಿಎಂ ಕುಮಾರಸ್ವಾಮಿಗೆ ಸವಾಲು ಹಾಕಿದರು. ಜನರಿಗೆ ಇಲ್ಲಿ ಮೋಸ ನಡೆಯುವುದಿಲ್ಲ ಅನ್ನೋದು ಗೊತ್ತಿದೆ ಎಂದರು.
ಬಿಎಸ್ವೈ ಅಭಿಮಾನಿಯಿಂದ ಹರಕೆ, ಉರುಳು ಸೇವೆ:
ಬೂಕನಕೆರೆ ಗ್ರಾಮದ ಬಿ.ಕೆ. ಮಧುಸೂದನ್ ಎಂಬಾತ ಗೊಗಲಮ್ಮ ದೇವಿಯ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿ, ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು.
ಸುಮಲತಾ ಗೆಲುವು ಸಾಧಿಸದೇ ಇದ್ದರೆ ಅರ್ಧ ಮೀಸೆ ತೆಗೆಸುವುದಾಗಿ ಸವಾಲು ಹಾಕಿದ ಬಿಎಸ್ವೈ ಅಭಿಮಾನಿ, ಸುಮಲತಾಗೆ ಮಂಡ್ಯದ ಮಣ್ಣಿನ ಋಣವಿದೆ. ಈ ಋಣ ತೀರಿಸಲು ಸುಮಲತಾ ಗೆಲುವು ಸಾಧಿಸಬೇಕು ಎಂದು ಹರಕೆ ಕಟ್ಟಿಕೊಂಡಿದ್ದಾರೆ.