ಮಂಡ್ಯ: ಬೆಂಗಳೂರಿನಲ್ಲಿ ಬ್ರಿಟನ್ ವೈರಸ್ ಪತ್ತೆಯಾದ ಹಿನ್ನೆಲೆ, ಮಂಡ್ಯ ಜಿಲ್ಲೆಯಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್ನಿಂದ ಬರುವವರ ಸಂಖ್ಯೆ ಹೆಚ್ಚಳ ಹಿನ್ನೆಲೆ, ಜಿಲ್ಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅದಲ್ಲದೆ, ವಿದೇಶದಿಂದ ಬಂದವರ ಮೇಲೆ ಈಗಾಗಲೇ ಆರೋಗ್ಯ ಇಲಾಖೆ ಹದ್ದಿನ ಕಣ್ಣುಟ್ಟಿದ್ದು, ಎಲ್ಲಾ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಯಾರೇ ಬಂದರೂ ಸಹ ತಕ್ಷಣವೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ನಡೆಸಿ ಕ್ವಾರಂಟೈನ್ ಮಾಡುವುದು ಖಚಿತ ಎಂದು ಮಾಹಿತಿ ನೀಡಿದರು.
ಜನಸಾಮಾನ್ಯರಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ನಿಂದಾಗುವ ಉಪಯೋಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಈಗಾಗಲೇ ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ. ಈವರೆಗೆ ಬ್ರಿಟನ್ನಿಂದ ಮಂಡ್ಯಕ್ಕೆ 18 ಮಂದಿ ಅಗಮಿಸಿದ್ದು, ಈ ಪೈಕಿ 17 ಜನರ ವರದಿ ನೆಗೆಟಿವ್ ಬಂದಿದೆ.
ಇನ್ನುಳಿದಂತೆ ಮಂಡ್ಯ ವಿಳಾಸ ನೀಡಿದ್ದ ವ್ಯಕ್ತಿಯೋರ್ವ ಜಿಲ್ಲಾಡಳಿತದ ಸಂಪರ್ಕಕ್ಕೆ ಸಿಗುತ್ತಿಲ್ಲ, ಆ ವ್ಯಕ್ತಿ ಮಂಡ್ಯಕ್ಕೆ ಆಗಮಿಸಿದ್ದಾರೆಯೇ ಅಥವಾ ಬೇರೆಡೆ ಸಂಚರಿಸಿದ್ದಾರೆಯೇ ಎಂಬ ಬಗ್ಗೆ ಶೋಧ ಮುಂದುವರಿದಿದೆ ಎಂದು ಹೇಳಿಕೆ ನೀಡಿದರು.