ಮಂಡ್ಯ: ರಾಜ್ಯದಲ್ಲಿ ಕೋವಿಡ್ನ ಎರಡನೇ ಅಲೆ ಹೆಚ್ಚುತ್ತಿರುವುದರಿಂದ ವೈರಮುಡಿ ಬ್ರಹ್ಮೋತ್ಸವ ಸರಳವಾಗಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಶ್ವಥಿ ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಾರ್ಚ್ 19 ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದ್ದು, ನಾಳೆ ನಡೆಯುವ ಪ್ರಮುಖ ಕಿರೀಟ ಧಾರಣಾ ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರ ನೀಡಿರುವ ಕೋವಿಡ್ ನಿರ್ದೇಶನಗಳನ್ನು ಕಟ್ಟನಿಟ್ಟಿನಿಂದ ಪಾಲನೆ ಮಾಡಲಾಗುತ್ತಿದೆ. ಸ್ಥಳೀಯರು ಮಾತ್ರ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು ಹೊರ ಜಿಲ್ಲೆ, ಹೊರರಾಜ್ಯದ ಭಕ್ತರಿಗೆ ಅವಕಾಶ ಇರುವುದಿಲ್ಲ ಎಂದರು.
ಸರಳ ವೈರಮುಡಿ ಬ್ರಹ್ಮೋತ್ಸವಕ್ಕೆ ನಿರ್ಧಾರ ದೇವಾಲಯದ ಒಳಗೆ ಹಾಗೂ ಹೊರಭಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಪ್ರತಿ ಬಾರಿ 50–100 ಮಂದಿ ಭಕ್ತರನ್ನು ಮಾತ್ರ ದೇವಾಲಯದೊಳಗೆ ಬಿಡಲಾಗುವುದು. ದೇವಾಲಯದ ಸಿಬ್ಬಂದಿ, ಅರ್ಚಕರು, ಸ್ವಯಂ ಸೇವಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ಕೆಎಸ್ಆರ್ಟಿಸಿ ನಿಲ್ದಾಣದಿಂದ ದೇವಾಸ್ಥಾನದವರೆಗೆ ರಸ್ತೆ ಉದ್ದಕ್ಕೂ ಒಂದು ಬದಿ ಬ್ಯಾರಿಕೇಡ್ ಹಾಕಲಾಗಿದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಮಾತನಾಡಿ, ವೈರಮುಡಿ ಬ್ರಹ್ಮೋತ್ಸವಕ್ಕೆ ಭದ್ರತೆ ಒದಗಿಸಲು 650 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾಲ್ವರು ಡಿವೈಎಸ್ಪಿ, 16 ಸರ್ಕಲ್ ಇನ್ಸ್ಪೆಕ್ಟರ್ಗಳು, 31 ಸಬ್ ಇನ್ಸ್ಪೆಕ್ಟರ್ಗಳು, 100 ಎಎಸ್ಐಗಳು, 432 ಕಾನ್ಸ್ಟೇಬಲ್ಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ದೇವಾಲಯದ ಒಳಗೆ ತೆರಳಲು ಹಾಗೂ ಹೊರ ಬರಲು ಪ್ರತ್ಯೇಕ ವ್ಯವಸ್ಥೆ ಇದ್ದು ಗೊಂದಲವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಉತ್ಸವಕ್ಕೆ ಬರುವ ಭಕ್ತರು ತಮ್ಮ ಜೊತೆಯಲ್ಲಿ ಗುರುತಿನ ಚೀಟಿಗಳನ್ನು ಇಟ್ಟುಕೊಂಡು ಬರಬೇಕು. ಇದರಿಂದ ಭಕ್ತರನ್ನು ಗುರುತಿಸಲು ಸುಲಭವಾಗುತ್ತದೆ. ಉತ್ಸವದಲ್ಲಿ ಕೆಲಸ ಮಾಡುವ ವಿವಿಧ ಇಲಾಖೆಗಳು ಸಿಬ್ಬಂದಿಗೆ ಪಾಸ್ ವಿತರಣೆ ಮಾಡಲಾಗಿದೆ. ಈ ಬಾರಿ ಉತ್ಸವದಲ್ಲಿ 2 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.