ಮಂಡ್ಯ: ಸುಮಲತಾ ಸ್ಪರ್ಧೆಯ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದೆ. ಆದರೆ ಗೊಂದಲಕ್ಕೆ ಕಾರಣವಾಗಿರುವುದು ಅವರು ಪಕ್ಷೇತರ ಅಭ್ಯರ್ಥಿನಾ ಅಥವಾ ಕಾಂಗ್ರೆಸ್ ಅಭ್ಯರ್ಥಿನಾ ಎಂಬುದು. ಇದಕ್ಕೆ ಇನ್ನೂ ಉತ್ತರ ಸಿಗಬೇಕಾಗಿದೆ. ಆದರೆ ಸ್ಪರ್ಧೆ ಮಾತ್ರ ಖಚಿತ ಎಂಬುದನ್ನು ಸುಮಲತಾ ಅವರೇ ಒಪ್ಪಿಕೊಂಡಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇನ್ನೂ ಐದು ದಿನ ಇದೆ. ಅಲ್ಲಿಯವರೆಗೂ ಕಾಯಬೇಕು. ಅಷ್ಟರೊಳಗೆ ಯಾರ ಯಾರ ನಿರ್ಧಾರ ಹೇಗೆ ಎಂಬುದು ಗೊತ್ತಾಗುತ್ತೆ ಅನ್ನೋ ಮೂಲಕ ಪಕ್ಷೇತರ ಅಭ್ಯರ್ಥಿನಾ ಅಥವಾ ಕಾಂಗ್ರೆಸ್ ಅಭ್ಯರ್ಥಿನಾ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದರು.
ಈಗ ಶ್ರೀರಂಗಪಟ್ಟಣ ಹಾಗೂ ನಾಗಮಂಗಲದಲ್ಲಿ ಪ್ರವಾಸ ಮಾಡುತ್ತೀದ್ದೇನೆ. ಒಳ್ಳೆಯ ಜನ ಬೆಂಬಲವಿದೆ. ಸ್ಪರ್ಧೆ ಖಚಿತವಾಗಿ ಮಾಡುತ್ತೇನೆ. ಜನರು ಶಕ್ತಿಯಾಗಿ ನಿಂತಿದ್ದಾರೆ ಎಂದರು.
ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಡಾಕ್ಟರ್ ಭೇಟಿ:
ಸ್ವಾಭಿಮಾನಕ್ಕಾಗಿ ಸತ್ಯಾಗ್ರಹ ಹೆಸರಿನಲ್ಲಿ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವು ವೈದ್ಯ, ಕಾಂಗ್ರೆಸ್ ಮುಖಂಡ ಡಾ. ರವೀಂದ್ರರನ್ನು ನಟಿ ಸುಮಲತಾ ಅಂಬರೀಶ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಮೂರು ದಿನಗಳಿಂದ ಉಪವಾಸ ಮಾಡುತ್ತಿರುವ ಡಾ. ರವೀಂದ್ರ, ಜಿಲ್ಲೆಯವರಿಗೇ ಟಿಕೇಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಹೀಗಾಗಿ ಇಂದೂ ಸಹ ಉಪವಾಸ ಕುಳಿತಿದ್ದಾರೆ. ಸಂಜೆಗೆ ಉಪವಾಸ ಅಂತ್ಯಗೊಳಿಸಲಿದ್ದು, ಇಂದಿಗೆ ಮೂರನೇ ದಿನದ ಉಪವಾಸವಾಗಿದೆ. ಹೋರಾಟಕ್ಕೆ ಹಲವು ನಾಯಕರು, ಹೋರಾಟಗಾರರು, ಅಂಬಿ ಬೆಂಬಲಿಗರು, ಅಭಿಮಾನಿಗಳು ಸಾಥ್ ನೀಡಿದ್ದರು. ಇವರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಹೋರಾಟಕ್ಕೆ ಬೆಂಬಲ ನೀಡಿದ್ದರು.