ಮಂಡ್ಯ: ರಾಜ್ಯದಲ್ಲಿ ಸಿಎಂ ಬದಲಾವಣೆಯ ದೊಂಬರಾಟ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಡಳಿತ ಸರ್ಕಾರದ ಕಾಲೆಳೆದರು. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ದೊಂಬರಾಟದಲ್ಲಿ ದೇವೇಗೌಡರ ಕುಟುಂಬ ಎಳೆಯುವುದು ಬೇಡ ಎಂದ್ರು.
ದೇವೇಗೌಡರನ್ನ ಯಡಿಯೂರಪ್ಪ ಅವರು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಅಂತಾ ಮಾಧ್ಯಮದಲ್ಲಿ ನೋಡಿದ್ದೆ. ಈ ರೀತಿಯ ಗೊಂದಲಗಳನ್ನ ಎರಡೂ ರಾಷ್ಟ್ರೀಯ ಪಕ್ಷ ಜೆಡಿಎಸ್ ಅನ್ನು ದುರ್ಬಳಕೆ ಮಾಡಿಕೊಂಡಿರೋದನ್ನ ಹಲವು ವರ್ಷಗಳಿಂದ ನೋಡಿದ್ದೇನೆ ಎಂದು ರಾಷ್ಟ್ರೀಯ ಪಕ್ಷಗಳ ಮೇಲೆ ಕಿಡಿಕಾರಿದರು.
ನಾವು ಯಾವ ಪಕ್ಷದ ಪರವಾಗಿಯೂ ಇಲ್ಲ. ನಾಡಿನ ಜನತೆಯ ಸಂಕಷ್ಟವನ್ನ ಗಮನಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ರಾಜಕೀಯ ಮಾಡಬಾರದೆಂದು ಮೌನದಲ್ಲಿದ್ದೇವೆ. ನಾವು ಯಾವುದೇ ರಾಜಿಗೆ ಒಳಗಾಗುವ ಪ್ರಶ್ನೆಯೇ ಇಲ್ಲ ಎಂದ್ರು. ಮುಂದಿನ ದಿನಗಳಲ್ಲಿ ಈ ನಾಡನ್ನು ಲೂಟಿ ಹೊಡೆದ ರಾಷ್ಟ್ರೀಯ ಪಕ್ಷದ ವಿರುದ್ಧ ಹೋರಾಡುತ್ತೇವೆ ಎಂದು ಗುಡುಗಿದರು.
ನಾಳೆ ಬೆಳಗ್ಗೆ ಅಧಿಕಾರ ಹಿಡಿಯಬೇಕೆಂಬ ಹುಚ್ಚಿಲ್ಲ. ಜನತೆ ಮುಂದೆ ಹೋಗುತ್ತೇವೆ, ಜನರಿಗೆ ಸ್ಪಂದಿಸುವ ದಿನಗಳು ಇವು. ಯಾವುದೇ ರಾಜಕೀಯದ ಟೀಕೆ ಟಿಪ್ಪಣಿಗೆ ನಾವು ಪಾಲುದಾರಾಗಿಲ್ಲ ಎಂದ ಮಾಜಿ ಸಿಎಂ ಕುಮಾರಸ್ವಾಮಿ, ಈಗ ರಾಜ್ಯದ ಮುಖ್ಯಮಂತ್ರಿಗಳ ಬದಲಾವಣೆ ಬೇಕಾ.. ನಾಡಿನ ಜನರಿಗೆ ರಕ್ಷಣೆ ಕೊಡುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಕೋವಿಡ್ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು:
ರಾಜ್ಯದಲ್ಲಿ ಲಾಕ್ಡೌನ್ ತೆರವಿನ ವಿಚಾರವಾಗಿ ಮಾತನಾಡಿ, ಕೋವಿಡ್ ಪ್ರಕರಣ ಇಳಿಮುಖವಾಗುತ್ತಿದೆ ಎಂದು ಸರ್ಕಾರದವರು ಲಘುವಾಗಿ ಪರಿಗಣಿಸಬೇಡಿ. ಈಗಲೂ ಸರ್ಕಾರ ಎಚ್ಚೆತ್ತು ಕೆಲಸ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಕೊಟ್ಟರು.
ಕೋವಿಡ್ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿದೆ, ಆದರೇ ಕೆಲವು ಜಿಲ್ಲೆಯನ್ನ ಅನ್ ಲಾಕ್ ಹಾಗೂ ಕೆಲವು ಜಿಲ್ಲೆ ಲಾಕ್ ಮಾಡಿದ್ದಾರೆ. ಬೆಂಗಳೂರು ನಗರಕ್ಕೆ ಹಲವಾರು ಜನ ಬರ್ತಿದ್ದಾರೆ. ಆದ್ರೆ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು. ಮಾಸ್ಕ್ ,ಸಾಮಾಜಿಕ ಅಂತರ ಕಾಯ್ದುಕೊಂಡು ನಿಯಮ ಪಾಲನೆ ಮಾಡಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.