ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಇಂದು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತರಕಾರಿ ನೀಡುವುದರ ಜೊತೆಗೆ, ಹಸು ಕಳೆದುಕೊಂಡಿದ್ದ ಕುಟುಂಬಗಳಿಗೆ ಅಭಿಮಾನಿಗಳ ವಂತಿಕೆ ಮೂಲಕ ಹಸುಗಳನ್ನು ನೀಡಿ ಗಮನ ಸೆಳೆದರು.
ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ಬಡ ಕುಟುಂಬಗಳಿಗೆ ಅಂಬರೀಶ್ ಅಭಿಮಾನಿಗಳು ಸಂಗ್ರಹ ಮಾಡಿದ್ದ ತರಕಾರಿಗಳನ್ನು ಹಂಚಿಕೆ ಮಾಡಿದರು. ಜೊತೆಗೆ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು. ತರಕಾರಿ ಹಂಚಿಕೆ ನಂತರ ಕುದರಗುಂಡಿ ಗ್ರಾಮದಲ್ಲಿ ಹಸುಗಳನ್ನು ಕಳೆದುಕೊಂಡಿದ್ದ ಎರಡು ಕುಟುಂಬಗಳಿಗೆ ಉಚಿತವಾಗಿ ಹಸುಗಳನ್ನು ಹಸ್ತಾಂತರ ಮಾಡಿದರು.
ಈ ಕುಟುಂಬಗಳು ಹಸುವಿನ ಸಹಾಯದಿಂದ ಜೀವನ ಸಾಗಿಸುತ್ತಿದ್ದವು. ಹಸುಗಳು ಸಾವಿಗೀಡಾದ ನಂತರ ಅಂಬರೀಶ್ ಅಭಿಮಾನಿಗಳ ಸಂಘದ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಹಸುಗಳನ್ನು ನೀಡಲಾಗಿದೆ. ಅವರ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.