ಗಂಗಾವತಿ (ಕೊಪ್ಪಳ): ಕೋವಿಡ್ ಬಿಕ್ಕಟ್ಟಿನ ನೆಪ ಹೇಳಿ, ಖಾಸಗಿ ಶಾಲಾ ಸಂಸ್ಥೆಗಳು ಹಲವು ಶಿಕ್ಷಕರನ್ನು ಕಾರಣವಿಲ್ಲದೇ ತೆಗೆದು ಹಾಕಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ವಿದ್ಯಾನಗರದ ಶಾರದ ವಿದ್ಯಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮುಖ್ಯ ಶಿಕ್ಷಕ ಬಸವರಾಜ ಕುಂಬಾರ ಎಂಬುವರನ್ನು ಆಡಳಿತ ಮಂಡಳಿ ಕೆಲಸದಿಂದ ಕೈ ಬಿಟ್ಟಿದೆ. ಈ ಹಿನ್ನೆಲೆ, ಅವರನ್ನು ಶಾಲೆಗೆ ಮರು ನಿಯೋಜಿಸಬೇಕೆಂದು ಖಾಸಗಿ ಶಿಕ್ಷಕರ ಒಕ್ಕೂಟ ಶಿಕ್ಷಣ ಇಲಾಖೆಯ ಮೊರೆ ಹೋಗಿದೆ.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮನೋಜಸ್ವಾಮಿ ಹಿರೇಮಠ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಸದಸ್ಯರು, ಮಾಹಿತಿ ನೀಡದೇ, ಹಲವು ವರ್ಷದಿಂದ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಏಕಾಏಕಿ ತೆಗೆದು ಹಾಕುತ್ತಿವೆ. ತಕ್ಷಣ ಇದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.