ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ಆಡೂರು ನೇಣಿಗೆ ಶರಣರಾಗಿರುವ ಘಟನೆ ಕುಷ್ಟಗಿಯಲ್ಲಿ ನಡೆದಿದೆ.
ಗುರುವಾರ ಸಂಜೆ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡಿದ್ದು, ಮಾನಸಿಕ ಖಿನ್ನತೆಯಿಂದ ನೊಂದಿದ್ದರು. ಗುರುವಾರ ಬೆಳಗ್ಗೆ ಪುರಸಭೆ ಸಭಾಂಗಣದಲ್ಲಿ ಕೋವಿಡ್ ಮುಂಜಾಗ್ರತಾ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಮನೆಗೆ ವಾಪಸ್ ಆಗಿದ್ದ ಅವರು ತಮ್ಮ ನಿವಾಸದಲ್ಲಿ ನೇಣಿಗೆ ಶರಣರಾಗಿದ್ದಾರೆ.
ಕುಷ್ಟಗಿ ಪಟ್ಟಣದ 16ನೇ ವಾರ್ಡ್ ಪಕ್ಷೇತರ ಸದಸ್ಯೆಯಾಗಿ ಚುನಾಯಿತರಾಗಿದ್ದ ರಾಜೇಶ್ವರಿ ಆಡೂರು ಪುರಸಭೆ ಉಪಾಧ್ಯಕ್ಷೆಯಾಗಿ ಅಧಿಕಾರ ನಡೆಸುತ್ತಿದ್ದರು.
ಇವರ ಪತಿ ಬೋದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ಸೇವೆಯಲ್ಲಿದ್ದಾರೆ. ಪತಿ ಹಾಗೂ ಮೂವರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.