ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಖ್ಯಾತಿ ಪಡೆದಿರುವ ಶ್ರೀ ಗವಿಸಿದ್ದೇಶ್ವರ ಜಾತ್ರೆ ಆರಂಭಗೊಂಡಿದ್ದು, ಜಾತ್ರೆಯಲ್ಲಿ ಫಲಪುಷ್ಪ ಪ್ರದರ್ಶನ ಯಾತ್ರಿಕರನ್ನು ಕೈಬೀಸಿ ಕರೆಯುತ್ತಿದೆ.
ಜಾತ್ರೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಷ್ಟೆ ಅಲ್ಲದೇ ರೈತರಿಗೆ, ಸಾರ್ವಜನಿಕರಿಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳಿವೆ. ಜ. 12ರಂದು ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಇದೀಗ ಯಾತ್ರಿಕರನ್ನು ಆಕರ್ಷಿಸುತ್ತಿದೆ.
ಸುಮಾರು 15 ಸಾವಿರ ಗುಲಾಬಿ ಹೂಗಳು ಹಾಗೂ ಇನ್ನಿತರ ಹೂಗಳನ್ನು ಬಳಸಿಕೊಂಡು ರೂಪಿಸಲಾಗಿರುವ ಹಂಪಿಯ ಕಲ್ಲಿನ ರಥದ ಮಾದರಿ ಪ್ರಮುಖ ಆಕರ್ಷಣೆಯಾಗಿದೆ. ಸುತ್ತಲೂ ಅಲಂಕಾರಿಕ ಹೂಗಿಡಗ, ಕಾರಂಜಿ ಜೋಡಿಸಿ ಮಧ್ಯದಲ್ಲಿ ಸ್ಥಾಪಿಸಲಾಗಿರುವ ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುತ್ಥಳಿ, ಮರಳಿನಲ್ಲಿ ರೂಪಿಸಿರುವ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಕಲಾಕೃತಿ, ಇತ್ತೀಚಿಗೆ ಕೃಷ್ಣೈಕ್ಯರಾದ ಪೇಜಾವರ ಶ್ರೀಗಳಿಗೆ ನಮನ, ಧಾರವಾಡದ ಕಲಾವಿದ ಜಗದೀಶ ಭಾವಿಕಟ್ಟಿ ಅವರು ತೆಂಗಿನ ಕಾಯಿಗಳಲ್ಲಿ ರಚಿಸಿರುವ ಕಲಾಕೃತಿಗಳು ಗಮನ ಸೆಳೆಯುತ್ತಿವೆ.
ಇದರ ಜೊತೆಗೆ ರೈತರು ಬೆಳೆದಿರುವ ಹಲವಾರು ಬಗೆಯ ತೋಟಗಾರಿಕಾ ಬೆಳೆಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗಿದ್ದು, ಬೆಳೆಗಳ ಕುರಿತು ಮತ್ತು ಅವುಗಳ ಪ್ರಯೋಜನ, ಮಹತ್ವದ ಕುರಿತು ಯಾತ್ರಿಕರಿಗೆ ತೋಟಗಾರಿಕಾ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ವಿವಿಧ ಬಗೆಯ ಫಲಪುಷ್ಪ, ಅಲಂಕಾರಿಕ ಸಸ್ಯಗಳನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದು, ಈ ವರ್ಷವೂ ಫಲಪುಷ್ಪ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.