ಕೊಪ್ಪಳ: ಬಿಜೆಪಿ ಒಂದು ಡ್ರಾಮಾ ಕಂಪನಿ ಇದ್ದಂಗೆ. ಡ್ರಾಮಾ ಮಾಡಿ ಎಂದು ಕೇಂದ್ರ ಸರ್ಕಾರ ಹೇಳಿಕೊಡುತ್ತದೆ. ಅದರಲ್ಲಿ ಈಶ್ವರಪ್ಪ ಶಕುನಿ ಪಾತ್ರವನ್ನು ಚೆನ್ನಾಗಿ ಮಾಡ್ತಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸದ್ಭಾವನಾ ಯಾತ್ರೆ ಬಳಿಕ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿ ಒಂದು ಡ್ರಾಮಾ ಕಂಪನಿ. ಒಬ್ಬರಿಗೆ ಧರ್ಮರಾಯ, ಮತ್ತೊಬ್ಬರಿಗೆ ದುರ್ಯೋಧನ, ಶಕುನಿ ಹೀಗೆ ವಿವಿಧ ಪಾತ್ರಗಳನ್ನು ನೀಡಿದ್ದಾರೆ. ಕೇಂದ್ರ ನೀಡಿರುವ ಪಾತ್ರವನ್ನು ಅವರು ನಿರ್ವಹಣೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ಇನ್ನು, ಅನರ್ಹ ಶಾಸಕರಿಂದ ಬಿಜೆಪಿಯವರು ಸಚಿವರಾದರು. ಆದರೆ ಈಗ ಅನರ್ಹರನ್ನು ಬೀದಿಗೆ ನಿಲ್ಲಿಸಿ ಬಿಜೆಪಿಯವರು ಸುಖ ಅನುಭವಿಸುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಆಗಿ ನೋಡಲು ಆರ್ಎಸ್ಎಸ್ಗೆ ಇಷ್ಟವಿಲ್ಲ. ಅಲ್ಲದೆ, ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿಯ ಕೆಲ ಮುಖಂಡರೇ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಂಗಡಗಿ ಆರೋಪಿಸಿದ್ರು.