ಗಂಗಾವತಿ: ದೃಢ ಮನಸ್ಸು, ಶಕ್ತ ದೇಹದಾರ್ಢ್ಯ ಹೊಂದಿದ ವ್ಯಕ್ತಿಗಳು ಸಾಗರಕ್ಕೆ ಧುಮುಕಿ ಈಜಿ ದಡ ಸೇರುತ್ತಾರೆ. ಆದರೆ ಸಂಸಾರ ಎಂಬ ಸಾಗರವನ್ನು ಈಜಿ ದಡ ಸೇರುವುದು ಅಷ್ಟು ಸುಲಭವಲ್ಲ ಎಂದು ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉದ್ಭವ ಮಲ್ಲಿಕಾರ್ಜುನ ದೇಗುಲದ ವಾರ್ಷಿಕೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ 21 ಹೊಸ ಜೋಡಿಗಳಿಗೆ ಆಶೀರ್ವಚನ ನೀಡಿದರು. ಸಂಸಾರ ಎಂದ ಮೇಲೆ ನಿತ್ಯವೂ ಗೋಳಾಟ ಇರುತ್ತದೆ. ಆದರೆ ಎಲ್ಲದರಲ್ಲೂ ಸತಿ-ಪತಿಗಳು ಪರಸ್ಪರ ಅನುಸರಿಸಿಕೊಂಡು ಹೋದಾಗ ಮಾತ್ರ ವಿರಸದಲ್ಲಿ ಸರಸ ಕಾಣಬಹುದು. ಸಣ್ಣ ವಿಷಯವನ್ನು ದೊಡ್ಡದು ಮಾಡಿದರೆ ಸಂಸಾರ ಸಾಗರವಾಗಿ ಕಾಣುತ್ತದೆ. ಎರಡು ಜೋಡೆತ್ತುಗಳ ಸಮಾನವಾಗಿ ಹೊಣೆ ಹೊತ್ತಾಗ ಮಾತ್ರ ಸಂಸಾರ ಸುಖ ಸಾಗರವಾಗುತ್ತದೆ ಎಂದರು.