ಗಂಗಾವತಿ(ಕೊಪ್ಪಳ): ಸಚಿವ ಸ್ಥಾನಕ್ಕಾಗಿ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಪ್ರಬಲ ಆಕಾಂಕ್ಷಿಯಾಗಿದ್ದು, ಶಿಫಾರಸು ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಕೇವಲ ಪರಣ್ಣ ಮಾತ್ರವಲ್ಲ, ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಶಾಸಕರಿಗೆ ಮಂತ್ರಿಗಿರಿ ಕೊಡುವಂತೆ ಒತ್ತಡ ಹೇರುವುದಾಗಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಅತ್ಯಂತ ಹಿಂದುಳಿದಿದೆ. ಹೀಗಾಗಿ ಸಚಿವ ಸಂಪುಟದ ವಿಸ್ತರಣೆಯಾದಲ್ಲಿ ಅಥವಾ ಪುನಾರಚನೆಯಾದಲ್ಲಿ ನಮ್ಮ ಭಾಗದ ಎಲ್ಲಾ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಕೋರಲಾಗುವುದು.
ನಮ್ಮ ಭಾಗದಲ್ಲಿ ಎಷ್ಟು ಶಾಸಕರನ್ನು ಆಯ್ಕೆ ಮಾಡಿಕೊಟ್ಟಿದ್ದೀವಿ. ನಮಗೂ ಸಾಮಾಜಿಕ ನ್ಯಾಯ ಕೊಡಿ ಎಂದು ಕೇಳುತ್ತೇವೆ. ಎಂಎಲ್ಸಿಗಳು ನಾವು ಯಾರೂ ನಮ್ಮ ಪಾಲು ಕೇಳಿಲ್ಲ. ಕೇವಲ ಶಾಸಕರಿಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ ಎಂದರು.