ಗಂಗಾವತಿ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ ರಥಯಾತ್ರೆಗೆ ಸಸಿಗೆ ನೀರೆರೆಯುವ ಮೂಲಕ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದ್ರು.
ಬಳಿಕ ಮಾತನಾಡಿದ ಶಾಸಕ ಮುನವಳ್ಳಿ, ದೈಹಿಕ, ಮಾನಸಿಕವಾಗಿ ಸದೃಢವಾದ ಮಕ್ಕಳು ದೇಶದ ಬಲಿಷ್ಠ ಆಸ್ತಿ. ಬಡ ಮಕ್ಕಳಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಲ್ಲಿ ಪೌಷ್ಠಿಕ ಅಂಶಗಳ ಕೊರತೆ ಹಿನ್ನೆಲೆ ಬಲಹೀನತೆಯಿಂದ ಬಳಲುವ ಸ್ಥಿತಿಯಿದ್ದು, ಇದರಿಂದ ಮಕ್ಕಳನ್ನು ಪಾರು ಮಾಡಲು ಸರ್ಕಾರ ಪೋಷಣ್ ಅಭಿಯಾನ ಜಾರಿಗೆ ತಂದಿದೆ. ಈ ಹಿನ್ನೆಲೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಈ ರಥಯಾತ್ರೆಯ ಮೂಲಕ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಂಚರಿಸಿ ತಾಯಂದಿರು, ಪಾಲಕರಲ್ಲಿ ಪೌಷ್ಠಿಕ ಆಹಾರದ ಮಹತ್ವ ಮತ್ತು ಪ್ರಯೋಜನೆಯ ಬಗ್ಗೆ ಪ್ರಚಾರ ಮಾಡಬೇಕು. ಹೀಗೆ ಮಾಡುವ ಮೂಲಕ ಮಕ್ಕಳಲ್ಲಿ ಅಪೌಷ್ಠಿಕತೆ ದೂರ ಮಾಡಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಕ್ಕಳು ಪೌಷ್ಠಿಕ ಅಂಶಗಳಿಂದ ಕೂಡಿರುವ ಹಣ್ಣು, ತರಕಾರಿ, ಧಾನ್ಯ, ಆಹಾರ ಪದಾರ್ಥಗಳ ವೇಷಭೂಷಣ ತೊಟ್ಟು ಗಮನ ಸೆಳೆದರೆ, ಇಲಾಖೆಯ ಸಿಬ್ಬಂದಿ ವಿವಿಧ ಸಂದೇಶಗಳ ಭಿತ್ತಿಚಿತ್ರಗಳನ್ನು ಹಿಡಿದು ಸಂದೇಶ ಸಾರಿದರು.