ಕೊಪ್ಪಳ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಈಗಾಗಲೇ ಪಾದಯಾತ್ರೆ ಪ್ರಾರಂಭವಾಗಿದೆ. ಪಾದಯಾತ್ರೆ ಕಲ್ಯಾಣ ಕರ್ನಾಟಕ ಗಡಿ ದಾಟುವುದರೊಳಗಾಗಿ ಸಿಎಂ ಯಡಿಯೂರಪ್ಪ ನಿರ್ಧಾರ ಕೈಗೊಳ್ಳಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು 2ಎ ಮೀಸಲಾತಿ ಕೇಳುತ್ತಿರುವುದು ಶೈಕ್ಷಣಿಕ ಮತ್ತು ಉದ್ಯೋಗಕ್ಕಾಗಿ. ರಾಜ್ಯದ ದೊಡ್ಡ ಸಮಾಜಗಳಲ್ಲಿ ಪಂಚಮಸಾಲಿ ಸಮಾಜವೂ ಒಂದು. ಸಿಎಂ ಯಡಿಯೂರಪ್ಪ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಿಎಸ್ವೈ ಸರ್ಕಾರ ರಚನೆಯಾಗಲು ನಮ್ಮ ಸಮಾಜದ ಕೊಡುಗೆಯೂ ಇದೆ. ಈಗ ಪಾದಯಾತ್ರೆ ಮುಂದುವರೆದಿದೆ. ನಮ್ಮ ಕಲ್ಯಾಣ ಕರ್ನಾಟಕ ಗಡಿಯನ್ನು ದಾಟುವುದರೊಳಗಾಗಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಯಡಿಯೂರಪ್ಪ ಅವರು ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಪಾದಯಾತ್ರೆಯ ಘೋಷವಾಕ್ಯ ಬದಲಾಗಲಿದೆ. ಬದಲಾಗುವ ಘೋಷವಾಕ್ಯವನ್ನು ನಾವು ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಹೇಳುತ್ತೇವೆ ಎಂದರು.
ಇದನ್ನೂ ಓದಿ: ನಕಲಿ ವೋಟರ್ ಐಡಿ ಪ್ರಕರಣ: ಶಾಸಕ ಮುನಿರತ್ನಗೆ ಬಿಗ್ ರಿಲೀಫ್
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸೌಲಭ್ಯ ನೀಡಲು ಅಧ್ಯಯನದ ಅಗತ್ಯವಿದೆ ಎಂಬ ಡಿಸಿಎಂ ಗೋವಿಂದ ಕಾರಜೋಳ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಸ್ವಾಮೀಜಿ, ನಮಗೆ ಕುಲಶಾಸ್ತ್ರದ ಅಧ್ಯಯನದ ಅಗತ್ಯವಿಲ್ಲ. ಗೋವಿಂದ ಕಾರಜೋಳ ಅವರಿಗೆ ತಪ್ಪು ಮಾಹಿತಿ ಇರಬಹುದು. ಅದನ್ನು ಸರಿಪಡಿಸಿಕೊಳ್ಳಬೇಕು. ಯಡಿಯೂರಪ್ಪ ಅವರು ಬದಲಾವಣೆಯಾಗುತ್ತಾರೋ ಇಲ್ಲವೋ ಅದು ನಮಗೆ ಗೊತ್ತಿಲ್ಲ. ನೀವು ಯಾರನ್ನಾದರೂ ತಂದು ಕೂರಿಸಿಕೊಳ್ಳಿ. ನಮಗೆ 2ಎ ಮೀಸಲಾತಿ ಬೇಕು. ಯಡಿಯೂರಪ್ಪ ಅವರ ಮೇಲೆ ನಮಗೆ ನಂಬಿಕೆ ಇದೆ. ಬೇರೆ ಬೇರೆಯವರು ಸಿಎಂ ಆದಾಗ ಅವರವರ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ನೀಡಿದ್ದಾರೆ. ಯಡಿಯೂರಪ್ಪ ಅವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಇದೇ ಸಂದರ್ಭದಲ್ಲಿ ಹೇಳಿದರು.