ಗಂಗಾವತಿ: ಸ್ವಚ್ಛತೆ, ನೈರ್ಮಲ್ಯ ನಿರ್ವಹಣೆಯಲ್ಲಿ ಪ್ರಥಮ ಸ್ಥಾನ ಪಡೆದು ಇತ್ತೀಚೆಗಷ್ಟೇ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿರುವ ತಾಲೂಕಿನ ಶ್ರೀರಾಮನಗರ ಗ್ರಾಮದ ಅಸಲಿಯತ್ತು ಬಯಲಾಗಿದೆ.
ಗ್ರಾಮದಲ್ಲಿ ಎಲ್ಲೆಂದರಲ್ಲಿ ಹರಡಿರುವ ಕಸಕಡ್ಡಿ, ತಿಪ್ಪೆಗುಂಡಿಗಳು, ಹರಿಯದೆ ನಿಂತಿರುವ ಚರಂಡಿ ನೀರು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಪರಿಣಾಮ ನೂರಾರು ಜನರು ಕಾಯಿಲೆಗೆ ತುತ್ತಾಗಿದ್ದು, ಡೆಂಗ್ಯೂ ಜ್ವರದಿಂದ ಎರಡನೇ ವಾರ್ಡ್ನ ಇಮ್ತಿಯಾಜ್ ಎಂಬ ಬಾಲಕ ಸಾವನ್ನಪ್ಪಿದ್ದಾನೆ.
ಹೆಸರಿಗಷ್ಟೇ ಇದು ಗಾಂಧಿ ಗ್ರಾಮ. ಹೊರಗೆ ಬೆಳಕು, ಒಳಗೆಲ್ಲಾ ಕೊಳಕು ಎಂಬ ಸ್ಥಿತಿ ಗ್ರಾಮದಲ್ಲಿದೆ. ದಾಖಲೆಗೆ ಮತ್ತು ಫೋಟೊ ಪೋಸ್ ನೀಡಲು ಮಾತ್ರ ಸ್ವಚ್ಛತೆ ಮಾಡಿ ಊರ ತುಂಬಾ ಗಲೀಜು ಹರಡಿರುವುದರಿಂದ ಗ್ರಾಮಕ್ಕೆ ಪ್ರಶಸ್ತಿ ಬಂದಿದೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.