ಕುಷ್ಟಗಿ: ಪಟ್ಟಣದ ಪುರಸಭೆ ಪಕ್ಕದ ನೆಲಮಟ್ಟದ ಜಲ ಸಂಗ್ರಹ ಟ್ಯಾಂಕ್ ಹಾಗೂ ಓವರ್ ಹೆಡ್ ಟ್ಯಾಂಕ್ ಬಳಿ ಸಾರ್ವಜನಿಕ ಶೌಚಾಲಯದ ಸೇಫ್ಟಿ ಟ್ಯಾಂಕ್ ಓವರ್ ಫ್ಲೋ ಆಗಿ ಹರಿಯುತ್ತಿದ್ದರೂ ಪುರಸಭೆ ನಿರ್ಲಕ್ಷಿಸಿರುವ ಆರೋಪ ಕೇಳಿ ಬಂದಿದೆ.
ಓದಿ: 2 ದಿನದಲ್ಲಿ ಹುಣಸೋಡು ಪ್ರಕರಣದ ಪ್ರಾಥಮಿಕ ವರದಿ ಕೈ ಸೇರಲಿದೆ: ಗೃಹ ಸಚಿವ ಬೊಮ್ಮಾಯಿ
ಕಳೆದ ಮೂರ್ನಾಲ್ಕು ದಿನಗಳಿಂದ ಸಾರ್ವಜನಿಕ ಶೌಚಾಲಯದ ಸೇಪ್ಟಿ ಟ್ಯಾಂಕ್ ಓವರ್ ಫ್ಲೋ ಆಗಿದ್ದು, ನೀರು ಸರಬರಾಜು ಮಾಡುವ ವಾಲ್ ಹಾಗೂ ಜಲ ಸಂಗ್ರಹಗಾರದ ಪಕ್ಕದಲ್ಲಿ ಹರಿದಿದೆ. ಸದರಿ ಭರ್ತಿಯಾಗಿರುವ ಸೇಫ್ಟಿ ಟ್ಯಾಂಕ್ ಗಲೀಜನ್ನು ಹೊರ ತೆಗೆಯುವ ವಾಹನ ಪುರಸಭೆಯಲ್ಲಿದ್ದರೂ ಬಳಸಿಕೊಂಡಿಲ್ಲ. ಬದಲಿಗೆ ಸೇಪ್ಟಿ ಟ್ಯಾಂಕ್ನಿಂದ ಪೈಪ್ಲೈನ್ ಮಾಡಿ ಚರಂಡಿಗೆ ಹರಿಸುತ್ತಿದ್ದಾರೆ ವಿನಾ ಭರ್ತಿಯಾದ ಸೇಫ್ಟಿ ಟ್ಯಾಂಕಿನ ಗಲೀಜು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸದೇ ನಿರ್ಲಕ್ಷಿಸಿದ್ದಾರೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಈ ವಿಷಯ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ನೈರ್ಮಲ್ಯ ಅಧಿಕಾರಿ ಮಹೇಶ ಅಂಗಡಿ ಗಮನದಲ್ಲಿದ್ದರೂ ಕ್ರಮ ವಹಿಸಿಲ್ಲ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಸದಸ್ಯರಾದ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ, ರಾಜೇಶ ಪತ್ತಾರ, ಅಂಬಣ್ಣ ಭಜಂತ್ರಿ ಭೇಟಿ ನೀಡಿ ನೈರ್ಮಲ್ಯ ಅಧಿಕಾರಿ ಹಾಗೂ ಅಲ್ಲಿನ ಪೌರ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಪುರಸಭೆ ಅದ್ಯಕ್ಷ ಗಂಗಾಧರ ಸ್ವಾಮಿ ಹಿರೇಮಠ ಮಾತನಾಡಿ, ಈ ವಿಷಯದಲ್ಲಿ ಪುರಸಭೆ ಮುಖ್ಯಾಧಿಕಾರಿ ನಿರ್ಲಕ್ಷ್ಯ ಇದೆ. ಆಡಳಿತ ಮಂಡಳಿ ಗಮನಕ್ಕೂ ತಾರದೇ ಏಕಪಕ್ಷೀಯ ಕ್ರಮ ಕೈಗೊಳ್ಳುತ್ತಿದ್ದಾರೆ. ಪುರಸಭೆ ಪಕ್ಕದಲ್ಲಿ ಈ ಅವಸ್ಥೆಯಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಸದಸ್ಯ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ ಮಾತನಾಡಿ, ಸಾರ್ವಜನಿಕರಿಗೆ ಸರಬರಾಜಾಗುವ ಕುಡಿಯುವ ನೀರಿನ ಟ್ಯಾಂಕ್ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ಓವರ್ ಫ್ಲೋ ಆಗಿದ್ದರು ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಸಾರ್ವಜನಿಕ ಶೌಚಾಲಯ ನಿರ್ವಹಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪುರಸಭೆ ಅಧಿಕಾರಿ ಹಾಗೂ ಆಡಳಿತ ಮಂಡಳಿ ಸಮನ್ವಯ ಕೊರತೆಯಿಂದ ಆಡಳಿತ ವ್ಯವಸ್ಥೆ ನಿಷ್ಕ್ರಿಯ ಆಗಿದೆ ಎಂದು ಆರೋಪಿಸಿದರು.