ಕುಷ್ಟಗಿ (ಕೊಪ್ಪಳ): ಕೊರೊನಾ ವೈರಸ್ ವ್ಯಾಪಕ ಹಿನ್ನೆಲೆ ಬಡ ಕಾರ್ಮಿಕ ಕುಟುಂಬಗಳು ಎಲ್ಲಿಯೂ ವಲಸೆ ಹೋಗದೆ ತಮ್ಮ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನಿರ್ವಹಿಸಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದ್ದಾರೆ.
ಇಂದು ತಾಲೂಕಿನ ಗುಮಗೇರಾ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಪೋಸ್ಟರ್ ಬಿಡುಗಡೆ ಮಾಡಿ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಗಾ ಯೋಜನೆಯಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ತೋಟಗಾರಿಕೆ, ರೇಷ್ಮೆ, ಕೃಷಿ, ಅರಣ್ಯ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ ಮಾಡಲು ಇದು ಉತ್ತಮ ಸದಾವಕಾಶವಿದೆ ಎಂದರು.
ಅಲ್ಲದೇ ಕಾಯಕ ಮಿತ್ರ ಆ್ಯಪ್ ಮೂಲಕ ಕೂಲಿ ಬೇಡಿಕೆ ಸಲ್ಲಿಸಲು ಲಾಗಿನ್ ನೋಂದಣಿಯ ಅಗತ್ಯ ಇಲ್ಲ. 15 ದಿನಗಳವರೆಗೆ ಕೂಲಿ ಬೇಡಿಕೆ ಸಲ್ಲಿಸಬಹುದು. ಮತ್ತು ಕೆಲಸ ಕೋರುವ ಪಂಚಾಯತ್ನಲ್ಲಿ ಕಾರ್ಮಿಕರು ಉದ್ಯೋಗ ಚೀಟಿ ಹೊಂದಿರಬೇಕು, ಹೊಂದಿರದಿದ್ದರೆ ಅದನ್ನು ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ ತಿಮ್ಮಪ್ಪ, ಪಿಡಿಓ ತಾಂತ್ರಿಕ ಸಹಾಯಕರು ಹಾಗೂ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.