ಕೊಪ್ಪಳ: ಹೆಚ್.ವಿಶ್ವನಾಥ್ಗೆ ಪರಿಷತ್ ಚುನಾವಣೆಯ ಟಿಕೆಟ್ ಕೈತಪ್ಪಿರುವ ಕುರಿತಂತೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿದ್ದು, ಅವರಿಗೆ ಇನ್ನೂ ಬೇರೆ ಬೇರೆ ಅವಕಾಶಗಳಿವೆ ಎಂದು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೂರು ಜನರ ಪೈಕಿ ಇಬ್ಬರಿಗೆ ಈಗ ಅವಕಾಶ ಸಿಕ್ಕಿದೆ. ಇನ್ನೂ ನಾಲ್ಕೈದು ಪೋಸ್ಟ್ಗಳಿವೆ, ನಾಮನಿರ್ದೇಶನ ಮಾಡಬಹುದು. ವಿಶ್ವನಾಥ್ ಅವರಿಗೂ ಅವಕಾಶ ನೀಡಬೇಕು ಅಂತ ನಮ್ಮ ಒತ್ತಾಯವೂ ಇದೆ ಎಂದರು.
ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ಪತ್ತೆಗೆ ಕ್ರಮ:
ಕಳಪೆ ಬಿತ್ತನೆ ಬೀಜ ಮಾರಾಟದ ಬಗ್ಗೆ ಈವರೆಗೆ ಯಾರೂ ಸಹ ಕಾಳಜಿ ವಹಿಸಿರಲಿಲ್ಲ. ನಾನು ಕೃಷಿ ಮಂತ್ರಿಯಾದ ಬಳಿಕ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರನ್ನು ಪತ್ತೆ ಮಾಡಲಾಗುತ್ತಿದೆ. ಈಗ ಬಿತ್ತನೆ ಸಮಯವಾಗಿರುವುದರಿಂದ ಕಳಪೆ ಬೀಜ ಮಾರಾಟ ಮಾಡುವುದು ಕಂಡುಬರುತ್ತಿದೆ. ಬೀದರ್, ರಾಯಚೂರು, ಹಾವೇರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸುಮಾರು 15 ಕೋಟಿ ರೂ. ಮೌಲ್ಯದ ಕಳಪೆ ಬೀಜ ಮಾರಾಟ ಜಾಲವನ್ನು ಪತ್ತೆ ಮಾಡಿ ಅವರ ಮೇಲೆ ಕೇಸ್ ಮಾಡಲಾಗಿದೆ. ಯಾವುದೇ ರೀತಿಯ ಒತ್ತಡ ಬಂದರೂ ನಾವು ಅವರನ್ನು ಸುಮ್ಮನೆ ಬಿಡುವುದಿಲ್ಲ. ಕಳಪೆ ಬೀಜ, ಕಳಪೆ ಗೊಬ್ಬರ, ಔಷಧಿಗಳ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹೊರಗಿನಿಂದ ಬಂದವರಿಂದ ಕೊರೊನಾ ಕೇಸ್ಗಳು ಪತ್ತೆಯಾಗುತ್ತಿವೆ. ಹೀಗಾಗಿ ಜನರು ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಬೇಕು. ಸೋಂಕಿನ ಬಗ್ಗೆ ಜಾಗೃತಿಯಿಂದ ಇರಬೇಕು ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದರು.