ಕುಷ್ಟಗಿ (ಕೊಪ್ಪಳ): ಈಗಿನ ಕೊರೊನಾ ಪರಿಸ್ಥಿತಿಯಲ್ಲಿ ಮನೆಯಲ್ಲಿದ್ದರೆ ನೊಣಗಳ ಕಾಟ, ಹೊರಗೆ ಹೋದರೆ ಕೊರೊನಾ ವೈರಸ್ ಕಾಟಕ್ಕೆ ಇಲ್ಲಿನ ಜನ ಬೇಸತ್ತಿದ್ದಾರೆ. ತಾಲೂಕಿನ ಕಡೇಕೊಪ್ಪ, ನಡುವಲಕೊಪ್ಪ, ಕಲಕೇರಿ, ತೋಪಲಕಟ್ಟಿ ನೊಣಗಳ ಕಾಟ ಅಸಹನೀಯವೆನಿಸಿದೆ. ಊಟದ ತಟ್ಟೆ ಹಿಡಿಯುತ್ತಿದ್ದಂತೆ ಜೇನು ನೊಣಗಳಂತೆ ಮುತ್ತಿಕೊಳ್ಳುತ್ತಿವೆ.
ಸೊಳ್ಳೆ ಪರದೆ ಒಳಗೆ ಕುಳಿತು ಊಟ ಮಾಡುವ ಪರಿಸ್ಥಿತಿ ಇದೆ. ಈ ದಿನಗಳಲ್ಲಿ ವಿವಾಹ ಮತ್ತಿತರೆ ಕಾರ್ಯಕ್ರಮ ನಡೆಸುವುದಕ್ಕೂ ನೊಣಗಳ ದಾಳಿ ಅಘೋಷಿತ ನಿರ್ಬಂಧವೆನಿಸಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕುಷ್ಟಗಿ-ಇಲಕಲ್ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮಾಣಿಕ್ಯಂ ಪೌಲ್ಟ್ರಿ ಫಾರಂನಿಂದ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದೆ. ಮಳೆಗಾಲ ಶುರುವಾಗುತ್ತಿದ್ದಂತೆ ತಾಲೂಕಿನ ಕಡೇಕೊಪ್ಪ, ತೋಪಲಕಟ್ಟಿ, ನಡುವಲಕೊಪ್ಪ, ಕಲಕೇರಿ ಮೊದಲಾದ ಗ್ರಾಮಗಳಲ್ಲಿ ವಿಪರೀತ ನೊಣಗಳ ಹಾವಳಿಗೆ ಜನ ರೋಸಿ ಹೋಗುವಂತಾಗಿದೆ.
ಕೋಳಿ ಫಾರಂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೊಣಗಳ ಹಾವಳಿ ಪ್ರತಿ ವರ್ಷವೂ ಕಂಡುಬರುತ್ತದೆ. ಇದರಿಂದ ಜನರು ಆಕ್ರೋಶಗೊಂಡಾಗ ಮಾತ್ರ ನೊಣಗಳ ನಿರೋಧಕ ಔಷಧಿ ಸಿಂಪಡಿಸಿ ಕೈತೊಳೆದುಕೊಳ್ಳುವುದು ಬಿಟ್ಟರೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ.
ಗ್ರಾಮಸ್ಥರ ಮನೆಗೆ ಯಾರಾದರೂ ಅತಿಥಿಗಳು ಮನೆಗೆ ಬಂದರೆ ಅವರು ಮುಂದೆ ನೊಣಗಳ ಅಟ್ಟಹಾಸ ಅಸಹ್ಯ ಹುಟ್ಟಿಸುತ್ತಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಚಟುವಟಿಕೆಗಳಿಗೆ ಕಾರ್ಯೋನ್ಮುಖರಾದ ರೈತಾಪಿ ವರ್ಗಕ್ಕೆ ನೊಣಗಳು ಅಕ್ಷರಶಃ ಶತ್ರುವಾಗಿವೆ.
ಈ ಕುರಿತು ತಾಲೂಕು ವೈದ್ಯಾಧಿಕಾರಿ ಡಾ. ಆನಂದ ಗೋಟೂರು ಅವರು ಮಾಹಿತಿ ನೀಡಿದ್ದು, ಗ್ರಾಮ ಪಂಚಾಯತಿಯಿಂದ ಈ ಪೌಲ್ಟ್ರಿ ಫಾರಂಗಳ ವಾಸ್ತವ ಸ್ಥಿತಿ-ಗತಿ ಪರಿಶೀಲಿಸಿ ನವೀಕರಿಸಬೇಕಿದೆ. ನವೀಕರಿಸುವ ಸಂದರ್ಭದಲ್ಲಿ ಗ್ರಾಮಸಭೆಯಲ್ಲಿ ಕೃಷಿ, ಪಶು ಸಂಗೋಪನಾ ಇಲಾಖೆ, ಕಂದಾಯ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಮಕ್ಷಮದಲ್ಲಿ ಸಭೆ ನಡೆಸಿ ನವೀಕರಣಗೊಳಿಸಬೇಕಿದೆ. ಈ ರೀತಿ ನವೀಕರಣಗೊಳಿಸಿದರೆ ಮಾತ್ರ ಅಧಿಕೃತ, ಇಲ್ಲವಾದಲ್ಲಿ ಅನಧಿಕೃತವೆನಿಸಲಿದೆ. ಹೀಗಾದಾಗ ಫಾರಂಗಳನ್ನು ಸೀಜ್ ಮಾಡುವ ಅವಕಾಶವಿದೆ ಎಂದು ತಿಳಿಸಿದರು.