ಗಂಗಾವತಿ: ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ 'ಪರಿಸರಕ್ಕಾಗಿ ಶ್ರಮದಾನ' ಎನ್ನುವ ಕಾರ್ಯಕ್ರಮವನ್ನು ಹಸಿರುಪಡೆ ಆಯೋಜಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಸಸಿನೆಟ್ಟು ಸಾಥ್ ನೀಡಿದರು.
ತಾಲೂಕಿನ ಶ್ರೀರಾಮನಗರದಲ್ಲಿ ಸಮಾನ ಮನಸ್ಕ ಯುವಕರು ಸೇರಿ ಗ್ರೀನ್ ಫೋರ್ಸ್(ಹಸಿರುಪಡೆ) ಎನ್ನುವ ತಂಡವನ್ನು ಕಟ್ಟಿಕೊಂಡು ಈ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ. ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ರಫಿ ನೇತೃತ್ವದಲ್ಲಿ ಯುವಕರು ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಮಸ್ಕಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ ಪಂಪನಗೌಡ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗಿಡ ನೆಡುವುದು, ನಿಯಮಿತವಾಗಿ ನೀರು, ಗೊಬ್ಬರ ಹಾಕಿ ಗಿಡಗಳ ಪೋಷಣೆ ಮಾಡುವಂತಹ ಕಾರ್ಯವನ್ನು ಈ ಹಸಿರು ಪಡೆ ಮಾಡುತ್ತಿದೆ. ಈಗಾಗಲೇ ಹಸಿರುಪಡೆ ಹುಡುಗರು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಗ್ರಾಮದ ರಸ್ತೆ, ಸರ್ಕಾರಿ ಕಚೇರಿ, ಶಾಲೆ - ಕಾಲೇಜು, ದೇವಸ್ಥಾನ, ಮಸೀದಿ, ಸಾರ್ವಜನಿಕ ಸ್ಥಳಗಳಲ್ಲಿ ನೂರಾರು ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ.