ಗಂಗಾವತಿ: ತಾಲೂಕಿನ ಜೀರಾಳ ಕಲ್ಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ಇಲಾಖೆಯ ಲೈನ್ ವಿಭಾಗದಿಂದ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಸುಮಾರು ಐದು ಲಕ್ಷ ರೂಪಾಯಿ ಹಣ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೆಲ ದಾಖಲೆಗಳು ಲಭ್ಯವಾಗಿದೆ.
ಜೀರಾಳ ಕಲ್ಗುಡಿ ಗ್ರಾಮ ಪಂಚಾಯಿತಿಯ ಸುಬ್ಬಾರಾವ್ ಎಂಬುವವರ ಹೊಲದ ಸಮೀಪ 'ನಮ್ಮ ಹೊಲ, ನಮ್ಮ ದಾರಿ' ಎಂಬ ಯೋಜನೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ದಾಖಲೆ ಸೃಷ್ಟಿಸಲಾಗಿದೆ. ಆದರೆ ವಾಸ್ತವದಲ್ಲಿ ಅಲ್ಲಿ ಕಾಮಗಾರಿಯೇ ನಡೆದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಲ್ಲದೇ ಜೀರಾಳ ಪಂಚಾಯಿತಿಯ ಕೂಲಿಕಾರರ ಜಾಬ್ ಕಾರ್ಡ್ ಬದಲಿಗೆ ಹೇರೂರು ಪಂಚಾಯಿತಿಯ ಜಾಬ್ ಕಾರ್ಡ್ಗಳಿಗೆ ಹಣ ಸಂದಾಯ ಮಾಡಲಾಗಿದ್ದು, ಇದು ಸಂಪೂರ್ಣ ಅವ್ಯವಹಾರವಾಗಿದೆ. ಇದರ ಹಿಂದೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಕೈವಾಡವಿದೆ. ಈ ಕುರಿತು ತಕ್ಷಣ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.