ಕುಷ್ಟಗಿ/ಕೊಪ್ಪಳ: ಅಕ್ರಮವಾಗಿ ಮಣ್ಣು ತೆಗೆದು ಫಿಲ್ಟರ್ ಮರಳು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಕುಷ್ಟಗಿ ಪೊಲೀಸರು ಪತ್ತೆಹಚ್ಚಿದ್ದು, ನಕಲಿ ಮರಳು ಸಮೇತ ಐವರನ್ನು ಬಂಧಿಸಿದ್ದಾರೆ.
ಸೋಮಪ್ಪ ಗುಡದೂರುಕಲ್, ಮುತ್ತಣ್ಣ ರಾಠೋಡ್, ಚಂದ್ರಪ್ಪ ರಾಠೋಡ್, ಕೃಷ್ಣಾ ಹಾಗೂ ಸಿದ್ದಪ್ಪ ಚನ್ನಪ್ಪನವರ್ ಬಂಧಿತ ಆರೋಪಿಗಳು. ಇವರು ಕ್ವಾರಿಯಲ್ಲಿ ಮಣ್ಣನ್ನು ಫಿಲ್ಟರ್ ಮಾಡಿ, ಅಸಲಿ ಮರಳು ಎಂದು ಅಕ್ರಮವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಸಿಪಿಐ ಚಂದ್ರಶೇಖರ ಜಿ. ತಿಳಿಸಿದ್ದಾರೆ.
ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡ್ರಗಲ್ ಸೀಮಾದ ಸಿದ್ದಪ್ಪ ಚನ್ನಪ್ಪನವರ್ ಅವರ ಕಲ್ಲು ಕ್ವಾರಿಗೆ ಸಿಪಿಐ ಚಂದ್ರಶೇಖರ ಜಿ, ಹನುಮಸಾಗರ ಪಿ ಎಸ್ ಐ ಅಶೋಕ ಬೇವೂರು ನೇತೃತ್ವದ ತಂಡ ದಾಳಿ ನಡೆಸಿ, 4 ಟ್ರ್ಯಾಕ್ಟರ್ ಟ್ರಿಪ್ ನಕಲಿ ಮರಳು, ಇಂಜಿನ್ ಆಯಿಲ್ ಮಷೀನ್, 7 ಕಪ್ಪು ಬಣ್ಣದ ಪೈಪ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.