ಕುಷ್ಟಗಿ(ಕೊಪ್ಪಳ): ಕೊರೊನಾ ಭೀತಿ ಪರಿಸ್ಥಿತಿಯಲ್ಲಿ ಆಡಳಿತ ನಡೆಸುವುದು ಕಠಿಣ ಕೆಲಸವಾಗಿದ್ದರೂ ಸಹ ಸರ್ಕಾರ ಮುನ್ನುಗ್ಗಿ ಕೆಲಸ ನಿರ್ವಹಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಹೇಳಿದರು.
ತಾಲೂಕಿನ ಕಡೇಕೊಪ್ಪ ಕ್ರಾಸ್ನಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಂದಾಜು 500 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಕೃಷ್ಣ ನದಿಯಿಂದ ನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ನೀರನ್ನು ತುಂಬಿಸುವ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಯಡಿಯೂರಪ್ಪ ಸರ್ಕಾರದ ಒಂದು ವರ್ಷದ ಅವಧಿಯಲ್ಲಾದ ಸಂಕಷ್ಟ ಅಷ್ಟಿಷ್ಟಲ್ಲ. ಬರ, ಪ್ರವಾಹ ಹತ್ತು ಹಲವಾರು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿಯೂ ಇದೀಗ ಕೊರೊನಾ ಬಂದು ಕಳೆದ ಐದು ತಿಂಗಳಿನಿಂದ ಇಡೀ ರಾಜ್ಯವನ್ನು ಕಟ್ಟಿಹಾಕಿದೆ. ಇದರ ಮಧ್ಯೆಯೂ ನಮ್ಮ ಸರ್ಕಾರ ಉತ್ತಮ ಆಡಳಿತ ನಿರ್ವಹಿಸಿದ್ದು, ಅಭಿವೃದ್ಧಿ ಕಡೆಗೆ ಗಮನಹರಿಸಿದೆ. ಸಿಎಂ ಯಡಿಯೂರಪ್ಪ ಅವರು ಕೋವಿಡ್ ಆಗಿ, ಕ್ವಾರಂಟೈನ್ನಲ್ಲಿದ್ದರೂ ಕೆಲಸ ನಿಲ್ಲಿಸಲಿಲ್ಲ ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ, ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪೂರ, ಬಸವರಾಜ ದಡೇಸುಗೂರು, ವಿಧಾನಪರಿಷತ್ ಸದಸ್ಯ ಬಸವರಾಜ್ ಪಾಟೀಲ ಇಟಗಿ, ಜಿ.ಪಂ. ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್, ಜಿ.ಪಂ.ಸಿಇಓ ರಘುನಂದಮೂರ್ತಿ, ತಾ.ಪಂ. ಅಧ್ಯಕ್ಷೆ ಮಹಾಂತಮ್ಮ ಪಾಟೀಲ, ತಾ.ಪಂ. ಸದಸ್ಯ ಯಂಕಪ್ಪ ಚೌವ್ಹಾಣ, ಜಿ.ಪಂ. ವಿಜಯ ನಾಯಕ್ ಸೇರಿ ಹಲವರು ಉಪಸ್ಥಿತರಿದ್ದರು.