ಕೊಪ್ಪಳ: ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, P-2254 ಸೋಂಕಿತ ವ್ಯಕ್ತಿ 27 ವರ್ಷದ ಪುರುಷ. ಈ ವ್ಯಕ್ತಿ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿನ ಕೆನರಾ ಬ್ಯಾಂಕ್ನ ಅಗ್ರಿಕಲ್ಚರ್ ಫೀಲ್ಡ್ ಆಫೀಸರ್. ಮೇ 20 ರಂದು ಸೋಂಕಿತ ವ್ಯಕ್ತಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮಕ್ಕೆ ಬಂದಿದ್ದಾನೆ. ಈತನ ಪೋಷಕರು ಕೇಸೂರು ಗ್ರಾಮದಲ್ಲಿ ವಾಸವಾಗಿರುವ ಹಿನ್ನೆಲೆಯಲ್ಲಿ ಕೇಸೂರು ಗ್ರಾಮಕ್ಕೆ ಬಂದಿದ್ದ. ಮೇ 22 ರಂದು ಮಸ್ಕಿಗೆ ಹೋಗಿ ಮತ್ತೆ ಅದೇ ದಿನ ಕೇಸೂರಿಗೆ ಹಿಂದಿರುಗಿದ್ದ. ಕುಷ್ಟಗಿಯಲ್ಲಿ ಈತನ ಗಂಟಲು ದ್ರವ, ರಕ್ತದ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್ಗೆ ಕಳಿಸಲಾಗಿತ್ತು. ಇಂದು ವರದಿ ಪಾಸಿಟಿವ್ ಬಂದಿದ್ದು, ಪಾಸಿಟಿವ್ ಎಂದು ದೃಢಪಟ್ಟಿದೆ. ಹಾಗಾಗಿ ಇವರು ಕೆಲಸ ಮಾಡುತ್ತಿದ್ದ ಬ್ಯಾಂಕ್ ಸಿಬ್ಬಂದಿಗಳೆಲ್ಲಾ ಪ್ರಾಥಮಿಕ ಸಂಪರ್ಕಿತರಾಗುತ್ತಾರೆ ಎಂದು ಮಾಹಿತಿ ನೀಡಿದರು.
ಈ ಬಗ್ಗೆ ರಾಯಚೂರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಅಲ್ಲದೆ ಸೋಂಕಿತ ವ್ಯಕ್ತಿಯು ಕೊಪ್ಪಳ ಜಿಲ್ಲೆಯ ಕೇಸೂರು ಗ್ರಾಮದಲ್ಲಿರುವ ಕುಟುಂಬದ ಸದಸ್ಯರು ಹಾಗೂ ಜ್ವರದ ಹಿನ್ನೆಲೆಯಲ್ಲಿ ದಾಖಲಾಗಿದ್ದ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಪ್ರಾಥಮಿಕ ಸಂಪರ್ಕಿತರಾಗುತ್ತಾರೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗುತ್ತದೆ. ಕೇಸೂರು ಗ್ರಾಮದಲ್ಲಿ ಸೋಂಕಿತನ ಮನೆಯ ಸುತ್ತಮುತ್ತಲ ಪ್ರದೇಶ ಕಂಟೇನ್ಮೆಂಟ್ ಝೋನ್ ಆಗಿದೆ. ಇಲ್ಲಿಂದ ಯಾರೂ ಹೊರ ಬರವಂತಿಲ್ಲ ಹಾಗೂ ಒಳ ಹೋಗುವಂತಿಲ್ಲ. ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತದೆ. ಕಂಟೇನ್ಮೆಂಟ್ ಝೋನ್ ಬಿಟ್ಟು ದೋಟಿಹಾಳ-ಕೇಸೂರು (ಅವಳಿ ಗ್ರಾಮಗಳು) ಗ್ರಾಮಗಳನ್ನು ಬಫರ್ ಝೋನ್ ಮಾಡಲಾಗಿದೆ ಎಂದು ಅವರು ತಿಳಿಸಿದರು.