ಕೊಪ್ಪಳ: ಹನುಮನ ಜನ್ಮ ಸ್ಥಳವಾಗಿರುವ ಅಂಜನಾದ್ರಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಆಂಜನೇಯಸ್ವಾಮಿಯ ಹಲವು ದೇವಸ್ಥಾನಗಳು ಇವೆ. ಈ ಎಲ್ಲ ದೇವಸ್ಥಾನಗಳು ಒಂದೊಂದು ಕಾರಣಕ್ಕೆ ವಿಶೇಷ ಎನಿಸುತ್ತವೆ. ಅದರಲ್ಲಿ ಜಿಲ್ಲೆಯ ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿರುವ ಶ್ರೀ ಮಾರುತೇಶ್ವರ ದೇವಸ್ಥಾನ ವಿಶೇಷತೆಯಿಂದ ಕೂಡಿದೆ. ಹನುಮನ ಬಹಳಷ್ಟು ದೇವಸ್ಥಾನ ದಕ್ಷಿಣಾಭಿಮುಖವಾಗಿ ಇರುತ್ತವೆ. ಈ ದಿಕ್ಕನ್ನು ಸಾಮಾನ್ಯವಾಗಿ ಜನರು ಹನುಮನದಿಕ್ಕು ಎಂದು ಕರೆಯುವುದುಂಟು. ಆದರೆ ಮಸಬಹಂಚಿನಾಳ ಗ್ರಾಮದಲ್ಲಿರುವ ಮಾರುತೇಶ್ವರ ದೇವಸ್ಥಾನ ಪಶ್ಚಿಮಾಭಿಮುಖವಾಗಿ ಇದೆ.
ಈ ದೇವಸ್ಥಾನ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಅಲ್ಲದೆ ಇಲ್ಲಿನ ಆಂಜನೇಯಸ್ವಾಮಿ ದೇವಸ್ಥಾನ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾನ ಮಾಡಿರುವುದರ ಹಿಂದೆ ಒಂದು ರೋಚಕವಾದ ಕಥೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಮದನಹಂಚಿನಾಳ ಗ್ರಾಮದ ಮೂಲಕ ಮುಂದಿನ ಗ್ರಾಮದಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಲು ವಾಹನವೊಂದರಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಆಗ ಮಸಬಹಂಚಿನಾಳ ಗ್ರಾಮದ ಬಳಿ ಆ ವಾಹನದ ಇರಿಸು ಮುರಿದು ಅಲ್ಲಿಯೇ ನಿಂತಿತು. ಹೀಗಾಗಿ ಜನರು ಆ ಮೂರ್ತಿಯನ್ನು ಮಸಬಹಂಚಿನಾಳ ಗ್ರಾಮದಲ್ಲಿಯೇ ಪ್ರತಿಷ್ಠಾಪಿಸಿದರು. ಮೂರ್ತಿ ಪಶ್ಚಿಮಾಭಿಮುಖವಾಗಿ ಇದ್ದುದ್ದರಿಂದ ಹಾಗೆಯೇ ಪ್ರತಿಷ್ಠಾಪನೆ ಮಾಡಲಾಯಿತು ಎಂದು ಸ್ಥಳೀಯರು ಹೇಳುತ್ತಾರೆ.