ಗಂಗಾವತಿ: ತಾಲೂಕಿನಾದ್ಯಂತ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಬಹುತೇಕ ಹಳ್ಳ-ಕೊಳ್ಳಗಳು ಭರ್ತಿಯಾಗಿ ಹರಿದಿದ್ದು, ಈಗ ನೀರು ಹರಿಯುವ ಪ್ರಮಾಣ ಕೂಡ ಕಡಿಮೆಯಾಗಿದೆ. ಆದ್ರೆ ಮರಳು ಕಳ್ಳರ ಕಣ್ಣು ಹಳ್ಳ-ಕೊಳ್ಳಗಳ ಮೇಲೆ ಬಿದ್ದಿದ್ದು, ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಹೌದು, ಗಂಗಾವತಿ ತಾಲೂಕಿನ ಎಳು ಮಕ್ಕಳ ತಾಯಮ್ಮ ದೇವಸ್ಥಾನದ ಪಕ್ಕ ಹರಿಯುತ್ತಿರುವ ಹಳ್ಳದಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ. ನಿತ್ಯ ಹತ್ತಾರು ಎತ್ತಿನ ಬಂಡಿಗಳಲ್ಲಿ ಮರಳು ಸಂಗ್ರಹಿಸಿ ನಗರಕ್ಕೆ ತಂದು ಮಾರಾಟ ಮಾಡಲಾಗುತ್ತಿದೆ. ಒಂದು ಟ್ರ್ಯಾಕ್ಟರ್ ಮರಳಿಗೆ ನಾಲ್ಕರಿಂದ ಆರು ಸಾವಿರ ರೂ. ಹಣ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಮರಳು ಸಾಗಾಣಿಕೆಯಿಂದ ಅಂತರ್ಜಲ ಕುಸಿಯುತ್ತದೆ. ಈ ಬಗ್ಗೆ ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಮರಳಿ ಗ್ರಾಮದ ಯುವಕರು ಆಗ್ರಹಿಸಿದ್ದಾರೆ.