ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ನೆಲೆಸಿರುವ ವೆಂಕಟೇಶ್ ಆರೇರ್ ಅವರ ಕುಟುಂಬದ ಸ್ಥಿತಿ ನೋಡಿದರೆ ಕರುಳು ಚುರುಕ್ ಎನ್ನುತ್ತದೆ.
ಕೃಷಿ ಮಾಡುತ್ತಿದ್ದ ವೆಂಕಟೇಶ್ ಎರಡು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅವರಿಗಿರುವ ಮೂವರು ಪುಟ್ಟ ಹೆಣ್ಣು ಮಕ್ಕಳ ಪೈಕಿ ಒಂದು ಮಗುವಿಗೆ ಅನಾರೋಗ್ಯ ಕಾಡುತ್ತಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಶಾಲೆ ಮುಚ್ಚಿದ ಪರಿಣಾಮ ಅಲ್ಲಿಯೇ ಆಯಾ ಕೆಲಸ ಮಾಡಿಕೊಂಡು ಕುಟುಂಬ ಪೋಷಿಸುತ್ತಿದ್ದ ವೆಂಕಟೇಶ್ ಪತ್ನಿ ರೂಪಾ ಅವರಿಗೂ ದುಡಿಮೆ ಇಲ್ಲದಂತಾಗಿದೆ.
ಇದರಿಂದಾಗಿ ಅನಾರೋಗ್ಯ ಪೀಡಿತ ಪತಿ ಮತ್ತು ಮಗುವಿಗೆ ಔಷಧ ಕೊಡಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಯಾರಾದರೂ ಔಷಧ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ರೂಪಾ ಅವರು ಅಂಗಲಾಚುತ್ತಿದ್ದಾರೆ.
ವೆಂಕಟೇಶ್ ಅವರ ಔಷಧೋಪಚಾರಕ್ಕಾಗಿ ತಿಂಗಳಿಗೆ 2000 ಬೇಕು. ಬರುವ ಕಡಿಮೆ ಆದಾಯದಲ್ಲೇ ಸಂಸಾರ ನಡೆಸಬೇಕು. ಈಗ ಔಷಧ ಕೊಡಿಸಲು ಸಹ ಕಷ್ಟವಾಗುತ್ತಿದೆ. ಹೀಗಾಗಿ ಈ ತಿಂಗಳು ಔಷಧ ತಂದಿಲ್ಲ. ದಾನಿಗಳು ಮುಂದೆ ಬಂದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ಕೇಳಿಕೊಂಡಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಅನೇಕರಿಗೆ ದಾನಿಗಳು ಸಹಾಯ ಮಾಡಿದ್ದಾರೆ. ಅದರಂತೆ ಈ ಕುಟುಂಬಕ್ಕೂ ಸಹ ಔಷಧ ಕೊಡಿಸುವ ಮೂಲಕ ನೆರವಾಗಬೇಕಿದೆ.