ಕೋಲಾರ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಅವೈಜ್ಞಾನಿಕವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 2008 ರಲ್ಲಿ ಪಂಜಾಬ್, ಹರಿಯಾಣ ರೈತರು ಎಂಎಸ್ಪಿ, ಎಪಿಎಂಸಿ ಬೇಡ ಎಂದು ಪ್ರತಿಭಟನೆ ಮಾಡಿದ್ರು. ಅವತ್ತು ಎಂಎಸ್ಪಿಯಲ್ಲಿ ಕ್ವಿಂಟಲ್ ಗೋಧಿ ಒಂದು ಸಾವಿರ ರೂಪಾಯಿ ಇತ್ತು. ಹೊರಗೆ 1,600 ರೂಪಾಯಿ ಇತ್ತು. ಆಗ ಇದೇ ರೈತರು ವಿರೋಧ ವ್ಯಕ್ತಪಡಿಸಿದ್ದರು. ನಂತರ 2013 ರಲ್ಲಿ ಶರತ್ ಪವಾರ್ ನೇತೃತ್ವದಲ್ಲಿ ಯುಪಿಎ ಸರ್ಕಾರ 13 ರಾಜ್ಯಗಳ ಕೃಷಿ ಸಚಿವರ ಸಮಿತಿ ರಚಿಸಿ, 98 ಪುಟಗಳ ವರದಿಯನ್ನ ಕೊಟ್ಟಿದೆ. ಅದರಲ್ಲಿ ರೈತರ ರಕ್ತ ಹೀರುತ್ತಿರುವ ಎಪಿಎಂಸಿಗಳನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದರು.
ನಂತರ 2019ರಲ್ಲಿ ಕಾಂಗ್ರೆಸ್ನವರು, ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿ ತೆಗೆದು ಹಾಕುವುದಾಗಿ ಹೇಳಿದ್ದರು. ಆದರೆ, ನಾವು ಎಪಿಎಂಸಿ ತೆಗೆದು ಹಾಕುತ್ತಿಲ್ಲ ಬದಲಾಗಿ ಉಳಿಸಿಕೊಂಡಿದ್ದೇವೆ. ಜೊತೆಗೆ ಎಂಸಿಪಿಯನ್ನೂ ಉಳಿಸಿಕೊಂಡಿದ್ದೇವೆ ಎಂದರು. ಈ ಮೂಲಕ ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಅದು ಅವರ ಹಕ್ಕು. ರೈತರು ಈವರೆಗೆ ಕೇಳುತ್ತಿದ್ದ ಹಕ್ಕನ್ನು ನಮ್ಮ ಸರ್ಕಾರ ಕೊಟ್ಟಿದೆ. ಸದ್ಯ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಅವೈಜ್ಞಾನಿಕವಾದುದು ಎಂದು ಬಿ.ಸಿ.ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.