ಕೋಲಾರ: ಕಳೆದ ಒಂದು ವರ್ಷದಿಂದ ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಜಿಲ್ಲೆಯ ಪುಟಾಣಿ ಬಾಲಕಿಯೊಬ್ಬಳು ಮಾದರಿಯಾಗಿದ್ದಾಳೆ.
ಮುಳಬಾಗಿಲಿನ 2ನೇ ತರಗತಿ ವಿದ್ಯಾರ್ಥಿನಿ ಚರಿತ ಆರ್.ರಾಯಲ್, ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನ ಕೊರೊನಾ ಪರಿಹಾರ ನಿಧಿಗೆ ನೀಡಿದ್ದಾಳೆ. ಕೋವಿಡ್ -19 ಚಿಕಿತ್ಸೆಗಾಗಿ ತಾನು ಕೂಡಿಟ್ಟಿದ್ದ 11,111 ರೂಪಾಯಿ ಹಣವನ್ನು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಹಸ್ತಾಂತರ ಮಾಡಿದ್ದಾಳೆ.
ಪ್ರತಿವರ್ಷ ತನ್ನ ಹುಟ್ಟುಹಬ್ಬದ ದಿನ ಕೂಡಿಟ್ಟಿದ್ದ ಹಣವನ್ನು ಅನಾಥಾಶ್ರಮಕ್ಕೆ ನೀಡುತ್ತಿದ್ದ ವಿದ್ಯಾರ್ಥಿನಿ, ಈ ಬಾರಿ ಪ್ರಧಾನ ಮಂತ್ರಿ ಪರಿಹಾರ ನಿಧಿ ಹೆಸರಿನಲ್ಲಿ ಚೆಕ್ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಮೋದಿ ತಾತ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಹಾಗಾಗಿ ಈ ನಿರ್ಧಾರ ಮಾಡಿದ್ದೇನೆ ಎಂದು ಚರಿತ ಹೇಳಿದ್ದಾಳೆ. ತನ್ನ ಪೋಷಕರಾದ ಲಾವಣ್ಯ ಹಾಗೂ ರಮೇಶ್ ಕುಮಾರ್ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾಳೆ. ವಿದ್ಯಾರ್ಥಿನಿಯ ಈ ಕಾರ್ಯಕ್ಕೆ ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.