ಕೋಲಾರ: ನೆರೆಯಿಂದ ತತ್ತರಿಸಿದ ಜನತೆ ಹಾಗೂ ಕ್ಷೇತ್ರದ ಅಭಿವೃದ್ದಿಗಾಗಿ ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪಾದಯಾತ್ರೆಯಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಿಂದ ತಿರುಪತಿಗೆ ಪಾದಯಾತ್ರೆ ಮಾಡುತ್ತಿರುವ ಶಾಸಕಿ, ಕೋಲಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆರೆಯಿಂದ ತತ್ತರಿಸಿದ್ದ ಸಂತ್ರಸ್ತರಿಗೆ ತಿರುಪತಿ ತಿಮ್ಮಪ್ಪ ದಯೆ ತೋರಬೇಕು ಹಾಗೂ ಕ್ಷೇತ್ರದ ಅಭಿವೃದ್ದಿಯೊಂದಿಗೆ ಸಂತ್ರಸ್ಥರ ಬದುಕನ್ನು ಹಸನುಗೊಳಿಸಬೇಕೆಂದು ತಿಮ್ಮಪ್ಪನ ದರ್ಶಕ್ಕೆ ಪ್ರಾರ್ಥನಾ ಪಾದಯಾತ್ರೆ ಮಾಡುತ್ತಿರುವುದಾಗಿ ಹೇಳಿದರು. ಬೆಳಗಾವಿಯ ಖಾನಾಪುರ ಕ್ಷೇತ್ರ ಅಭಿವೃದ್ದಿ ಪಥದತ್ತ ಸಾಗಲಿ ಎಂಬ ನಿಟ್ಟಿನಲ್ಲಿ ತಮ್ಮ ಪತಿ ಹೇಮಂತ್ ನಿಂಬಾಳ್ಕರ್ ಅವರೊಂದಿಗೆ ದರ್ಶನಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು.
ಇನ್ನು ಕಳೆದ ಶನಿವಾರದಿಂದ ಪಾದಯಾತ್ರೆಯಲ್ಲಿ ತೊಡಗಿದ್ದು, ಇಂದಿಗೆ ಮೂರನೇ ದಿನ ಸುಮಾರು 95 ಕಿಲೋಮೀಟರ್ಗಳಷ್ಟು ಪಾದಯಾತ್ರೆ ಮಾಡಿದ್ದಾರೆ. ಅಲ್ಲದೆ ಪ್ರತಿದಿನ 30 ಕಿಲೋಮೀಟರ್ಗಳಷ್ಟು ಪಾದಯಾತ್ರೆ ಮಾಡಲಿದ್ದು, ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದಕ್ಕೆ ಕನಿಷ್ಠ ಆರು ದಿನಗಳು ಕಾಲಾವಕಾಶ ಬೇಕೆಂದರು.
ಇನ್ನು ತಿರುಪತಿ ಶಾಸಕಿ ಅಂಜಲಿ ಲಿಂಬಾಳ್ಕರ್ ಅವರ ಮನೆ ದೇವರಾಗಿದ್ದು, ಪ್ರತಿ ವರ್ಷಕ್ಕೊಮ್ಮೆ ತಿರುಪತಿಗೆ ಆಗಮಿಸುತ್ತೇವೆ ಈ ಬಾರಿ ವಿಶೇಷವಾಗಿ ಪಾದಯಾತ್ರೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಪಾದಯಾತ್ರೆ ಮುಗಿಸಿ ದೇವರ ದರ್ಶನ ಪಡೆದು ಅಲ್ಲಿಂದ ಕಾರಿನ ಮೂಲಕ ವಾಪಸ್ಸು ಬರುವುದಾಗಿ ತಿಳಿಸಿದರು.
ಇನ್ನು ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದ ಪೈಪೋಟಿಗೆ ಸಂಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಹಿರಿಯ ನಾಯಕರು ಇದ್ದಾರೆ, ಹೀಗಾಗಿ ಹೈಕಮಾಂಡ್ ತೀರ್ಮಾನವನ್ನು ನಾವೆಲ್ಲ ಸ್ವಾಗತಿಸಿ ಅದರ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದರು.
ಇನ್ನು ಶಾಸಕಿ ಅಂಜಲಿ ಲಿಂಬಾಳ್ಕರ್ ಅವರ ಪ್ರಾರ್ಥನಾ ಪಾದಯಾತ್ರೆಗೆ ತಮ್ಮ ಪತಿ ಹೇಮಂತ್ ನಿಂಬಾಳ್ಕರ್ ಮತ್ತು ಸಂಬಂಧಿಕರು ಸೇರಿದಂತೆ ಸ್ನೇಹಿತರು ಸಾಥ್ ನೀಡಿದ್ದಾರೆ.