ಕೋಲಾರ: ಕೊರೊನಾ ರೋಗಿಗಳನ್ನು ನೋಡಿಕೊಳ್ಳುವುದಕ್ಕೆ ಅಟೆಂಡರ್ಗಳನ್ನು ನೇಮಿಸಿರುವುದು ತಪ್ಪು ಎಂದು ಸಚಿವ ಸುಧಾಕರ್ ಹೇಳಿದರು.
ಆಕ್ಸಿಜನ್ ಕೊರತೆಯಿಂದಾಗಿ ನಾಲ್ವರು ಕೋವಿಡ್ ಸೋಂಕಿತರು ಮೃತಪಟ್ಟ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ನಲವತ್ತು ವೆಂಟಿಲೇಟರ್ ಇದ್ದರೂ ಬಳಕೆ ಮಾಡುತ್ತಿಲ್ಲ, ಇದೊಂದು ದೊಡ್ಡ ಅಪರಾಧ. ಇದರಿಂದ ಪ್ರತಿನಿತ್ಯ 10-11 ಜನ ಕೋವಿಡ್ ಸೋಂಕಿತರು ಸಾಯುತ್ತಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸರ್ಜನ್ ಸೇರಿ ಇಬ್ಬರು ಅಮಾನತು :
ಜಿಲ್ಲಾಸ್ಪತ್ರೆಯಲ್ಲಿ ಕಣ್ಣಿಗೆ ಕಾಣುವಷ್ಟು ಲೋಪದೋಷಗಳಿದ್ದು, ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಆರ್.ಎಂ.ಒ ಅವರನ್ನು ಅಮಾನತು ಮಾಡಿ ಆದೇಶಿಸಿದ್ದೇನೆ. ಜೊತೆಗೆ ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಲು ಮಾಡಲು ಮತ್ತು ನಿನ್ನೆ ಆಕ್ಸಿಜನ್ ಸರಬರಾಜು ವ್ಯತ್ಯಯದಿಂದ ಕೋವಿಡ್ ರೋಗಿಗಳು ಮೃತಪಟ್ಟಿರುವ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದೇನೆ ಎಂದರು.
ತಡರಾತ್ರಿ ಸಭೆ ನಡೆಸಿದ ಸಚಿವರು:
ರಾತ್ರಿ 11:30 ಕ್ಕೆ ಆಸ್ಪತ್ರೆಗೆ ಆಗಮಿಸಿದ ಸಚಿವ ಸುಧಾಕರ್, ತಡರಾತ್ರಿ 12: 30 ಆದರೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಚಿವರ ಕಾಲಿಗೆ ಬಿದ್ದ ಮಹಿಳೆ: ಆಸ್ಪತ್ರೆಗೆ ಸಚಿವರು ಆಗಮಿಸುತ್ತಿದ್ದಂತೆ ಕೋವಿಡ್ ರೋಗಿಯೊಬ್ಬರ ಸಂಬಂಧಿ ಮಹಿಳೆ ಸಚಿವರ ಕಾಲಿಗೆ ಬಿದ್ದು ನಮ್ಮವರನ್ನು ಉಳಿಸಿಕೊಡಿ ಎಂದು ಅಂಗಲಾಚಿದ ಪ್ರಸಂಗವೂ ನಡೆಯಿತು.
ಇದನ್ನೂ ಓದಿ: ಆಕ್ಸಿಜನ್ ಸಿಗದೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಸಾವು: ಕುಟುಂಬಸ್ಥರ ಆರೋಪ