ಮಡಿಕೇರಿ : ಕರ್ನಾಟಕದ ಕಾಶ್ಮೀರ ಕೊಡಗು ಹಸಿರು ಸೀರೆಯುಟ್ಟು, ಮಂಜಿನ ಹನಿಗಳ ಅಲಂಕಾರದೊಂದಿಗೆ ಅಣಿಯಾಗುತ್ತಿದೆ. ಅದರಲ್ಲೂ ಮಡಿಕೇರಿಯ ರಾಜಾ ಸೀಟ್ ಬಣ್ಣ ಬಣ್ಣದ ಪುಷ್ಪಗಳ ರಾಶಿ, ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯದೊಂದಿಗೆ ಪ್ರವಾಸಿಗರನ್ನು ತನ್ನ ಮಡಿಲಿಗೆ ಕೈಬೀಸಿ ಕರೆಯುತ್ತಿದೆ. ಕೊಡಗಿನಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಪ್ರಕೃತಿ ಹಚ್ಚ ಹಸಿರಿನಿಂದ ಮೈತುಂಬಿಕೊಂಡಿದೆ. ಪ್ರವಾಸಿಗರಿಗೆ ವೀಕೆಂಡ್ನಲ್ಲಿ ಒಂದು ರಿಲ್ಯಾಕ್ಸೇಷನ್ಗೆ ಈ ಜಾಗ ಈ ಸಮಯ ಸೂಕ್ತವಾಗಿದೆ.
ಮಳೆಯಿಂದಾಗಿ ಜಿಲ್ಲೆಯ ವನ ಸಿರಿಗಳೆಲ್ಲ ಹಚ್ಚ ಹಸಿರಿನಿಂದ ಕೂಡಿದ್ದು, ಅಂದಕ್ಕೆ ಮನಸೋತ ಪ್ರವಾಸಿಗರ ದಂಡೇ ಕೊಡಗಿನತ್ತ ಹರಿದು ಬರುತ್ತಿದೆ. ಕೊಡಗಿನ ಹಸಿರು ಮೈದಳೆದ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹೆಚ್ಚಿನ ಪ್ರವಾಸಿಗರಿಂದ ಟೂರಿಸ್ಟ್ ಸ್ಪಾಟ್ಗಳು ಗಿಜಿಗುಡುತ್ತಿವೆ. ಸೆಲ್ಫಿ, ಫೋಟೋ ಶೂಟ್ ಮಾಡುತ್ತಾ ವಿಕೇಂಡ್ ಮಸ್ತಿ ಮಾಡುತ್ತಾ ರೀಲಾಕ್ಸ್ ಮೂಡ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ವೀಕೆಂಡ್ ಹಾಗೂ ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಕೊಡಗಿನತ್ತ ದಾಂಗುಡಿ ಇಡುತ್ತಿದ್ದಾರೆ. ಕೊಡಗಿಗೆ ಬಂದ ಮೇಲೆ ರಾಜಾ ಸೀಟ್ಗೆ ಎಂಟ್ರಿ ಕೊಡದೆ ಹೋಗೋಕೆ ಯಾರೊಬ್ಬರಿಗೂ ಮನಸ್ಸೇ ಬರೋದಿಲ್ಲ. ಹೀಗಾಗಿ, ಕೊಡಗಿಗೆ ಆಗಮಿಸಿಸೋ ಪ್ರವಾಸಿಗರೆಲ್ಲ ರಾಜಾಸೀಟ್ಗೆ ಒಂದು ರೌಂಡ್ ವಿಸಿಟ್ ಕೊಟ್ಟು ಹೋಗುತ್ತಾರೆ.
ರಾಜಾಸೀಟ್ಗೆ ಎಂಟ್ರಿಯಾಗುತ್ತಿದಂತೆ ಪ್ರವಾಸಿಗರನ್ನು ಆಕರ್ಷಿಸೋದೆ ಪುಷ್ಟವನಗಳ ರಾಶಿ. ಬಗೆಬಗೆಯ ಹೂವುಗಳು ಅರಳಿ ನಿಂತಿದ್ದು, ಪ್ರವಾಸಿಗರನ್ನು ವಾರ್ಮ್ ವೆಲ್ಕಮ್ ಮಾಡುತ್ತಿವೆ. ಇನ್ನೂ ಒಳಹೋಗಿ ವ್ಯೂ ಪಾಯಿಂಟ್ನಲ್ಲಿ ನಿಂತು ನೋಡಿದರೆ, ಹಸಿರನ್ನೇ ಹೊದ್ದು ಮಲಗಿದಂತಿರುವ ಗುಡ್ಡಬೆಟ್ಟಗಳ ಸಾಲು ಪ್ರವಾಸಿಗರಿಗೆ ಮತ್ತಷ್ಟು ಮುದ ನೀಡುತ್ತಿವೆ.
ಜಿಲ್ಲೆಗೆ ಪ್ರವಾಸಿಗರು ಆಗಮಿಸುತ್ತಿದಂತೆ ಜಿಲ್ಲೆಯ ಪ್ರವಾಸೋದ್ಯಮ ಅವಲಂಬಿತರ ಮನದಲ್ಲೂ ಕೂಡ ಮಂದಹಾಸ ಮೂಡುವಂತೆ ಮಾಡಿದೆ. ಕೊಡಗಿನಲ್ಲಿ ಬಹುತೇಕ ಮಂದಿ ಪ್ರವಾಸೋದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಸಮ್ಮರ್ ಹಾಲಿಡೇ ಹಾಗೂ ವೀಕೆಂಡ್ನಲ್ಲಿ ಆಗಮಿಸುವ ಪ್ರವಾಸೋದ್ಯಮಿಗಳು ಕೂಡ ಒಂದಷ್ಟು ವ್ಯಾಪಾರ, ವ್ಯವಹಾರದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಹೋಮ್ ಮೇಡ್ ಚಾಕೋಲೇಟ್, ಸ್ಪೈಸಸ್ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿದೆ. ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದು, ಪ್ರವಾಸೋದ್ಯಮ ಕೊಂಚ ಚೇತರಿಕೆ ಕಾಣುತ್ತಿದೆ ಅಂತಾರೆ ಸ್ಥಳೀಯ ವ್ಯಾಪಾರಿ ಪ್ರತಾಪ್.
ಇದನ್ನೂ ಓದಿ: ಪ್ರಕೃತಿ ಮಡಿಲಿನಲ್ಲಿ ಕಂಗೊಳಿಸುತ್ತಿದ್ದಾಳೆ 'ಹುಲಿಗೆಮ್ಮ': ಪ್ರವಾಸಿಗರಿಗಿದು ರಮ್ಯ ತಾಣ..