ಕುಶಾಲನಗರ/ಕೊಡಗು: ವಿಶ್ವವನ್ನೇ ಆತಂಕಕ್ಕೆ ದೂಡಿರುವ ಕೊರೊನಾ ವೈರಸ್ ಎಲ್ಲೆಡೆ ಮತ್ತಷ್ಟು ಹರಡುತ್ತಲೇ ಇದೆ. ಇದನ್ನರಿತ ನಗರದ ಸ್ವಯಂ ಸೇವಾ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಉಚಿತ ಮಾಸ್ಕ್ ವಿತರಿಸಿವೆ.
ಮನುಷ್ಯನಿಗೆ ವೈರಸ್ ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ. ಆದರೆ ಮಾಸ್ಕ್ಗಳು ದುಬಾರಿಯಾಗಿದ್ದು, ಎಲ್ಲಾ ಬಂದ್ ಆಗಿ ದುಡಿಮೆಯೇ ಇಲ್ಲದಂತಹ ಸಂದರ್ಭದಲ್ಲಿ ಬಡವರಿಗೆ, ನಿರ್ಗತಿಕರಿಗೆ ಈ ಮಾಸ್ಕ್ ಕೊಳ್ಳುವುದು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣ ಆಗಿದೆ. ಇದನ್ನು ಅರಿತು ಕೊಡಗು ಜಿಲ್ಲೆ ವಿರಾಜಪೇಟೆಯ ಆರಾಧನಾ ಸಂಸ್ಥೆ ಮತ್ತು ಸೇವಾ ಭಾರತಿ ಸಂಸ್ಥೆಗಳು ಉಚಿತವಾಗಿ ಮಾಸ್ಕ್ ತಯಾರು ಮಾಡಿಕೊಡುತ್ತಿವೆ.
ಒಹೆಚ್ಪಿ ಶೀಟ್, ಫಾಮ್, ಎಲಾಸ್ಟಿಕ್ ಮತ್ತು ಗಮ್ ಟೇಪ್ ಬಳಸಿ ಮಾಸ್ಕ್ ಸಿದ್ಧಪಡಿಸಲಾಗುತ್ತಿದೆ. ಈ ಮಾಸ್ಕ್ ಕೇವಲ ಮೂಗು, ಬಾಯಿಯನ್ನು ಕವರ್ ಮುಚ್ಚುವುದಷ್ಟೇ ಅಲ್ಲದೆ ಕಣ್ಣನ್ನೂ ಮುಚ್ಚಲಿದೆ. ಅಂದರೆ ಇಡೀ ಮುಖವನ್ನು ಮುಚ್ಚುವುದರಿಂದ ಎದುರಿಗೆ ಯಾರೇ ನಿಂತು ಉಸಿರಾಡಿದ್ರೂ ಅವರ ಉಸಿರನ್ನು ನಾವು ನೇರವಾಗಿ ಸೇವಿಸದಂತೆ ತಡೆಯಲು ಸಹಕಾರಿಯಾಗಲಿದೆ.
ಇಂತಹ ಐದು ಸಾವಿರ ಮಾಸ್ಕ್ಗಳನ್ನು ಆರಾಧನಾ ಸಂಸ್ಥೆ ಮತ್ತು ಸೇವಾ ಭಾರತಿ ಉಚಿತವಾಗಿ ಜಿಲ್ಲಾಡಳಿತಕ್ಕೆ ಕೊಡಲಿವೆ. ಸೇವಾ ಭಾರತಿಯ 40 ಕಾರ್ಯಕರ್ತರು ಈಗಾಗಲೇ 4 ಸಾವಿರ ಮಾಸ್ಕ್ಗಳನ್ನು ತಯಾರು ಮಾಡಿದ್ದಾರೆ. ಇನ್ನೂ ಒಂದು ಸಾವಿರ ಮಾಸ್ಕ್ಗಳನ್ನು ಸಿದ್ಧಪಡಿಸುತ್ತಿದ್ದು, ಒಟ್ಟು ಐದು ಸಾವಿರ ಮಾಸ್ಕ್ಗಳನ್ನು ಜಿಲ್ಲಾಡಳಿತಕ್ಕೆ ನೀಡಲಿದ್ದಾರೆ. ಕೆಲಸವೂ ಇಲ್ಲದೆ ಮನೆಯಲ್ಲೇ ಸುಮ್ಮನೆ ಕುಳಿತಿದ್ದ ಸೇವಾ ಭಾರತಿ ಕಾರ್ಯಕರ್ತರು ಇದೀಗ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.