ಕೊಡಗು: ಇದೇ ತಿಂಗಳು ನಡೆಯಲಿರುವ ದಸರಾ ಹಾಗೂ ತಲಕಾವೇರಿಯ ತೀರ್ಥೋದ್ಭವ ಜನದಟ್ಟಣೆ ಆಗದಂತೆ ಮತ್ತು ಸಾಂಪ್ರದಾಯಿಕ ವಿಧಿ ವಿಧಾನಗಳಿಗೆ ಧಕ್ಕೆಯಾಗದಂತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದ್ದಾರೆ.
ದಸರಾ ಪ್ರಯಕ್ತ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಮಡಿಕೇರಿ ದಸರಾ ಸಂಬಂಧ ಈಗಾಗಲೇ ರಚನೆಯಾದ ಸಮಿತಿ, ಜನಪ್ರತಿನಿಧಿಗಳೊಂದಿಗೆ ಹಲವು ಭಾರಿ ಸಭೆಗಳನ್ನು ನಡೆಸಿದ್ದೇವೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಗೋಣಿಕೊಪ್ಪ ಹಾಗೂ ಮಡಿಕೇರಿ ದಸರಾಕ್ಕೆ ದಶಮಂಟಪ ಸಮಿತಿ, ಕರಗ ತೆಗೆದುಕೊಂಡು ಹೋಗುವುದು ಇತ್ಯಾದಿಗಳಿಗೆ ಇಂತಿಷ್ಟು ಜನರು ಭಾಗವಹಿಸಬೇಕು ಎಂಬ ನಿಯಮವಿದೆ. ಹೀಗೆ ಭಾಗವಹಿಸುವವರಿಗೆ ಆರ್ಟಿಪಿಸಿಆರ್ ಕೊರೊನಾ ಟೆಸ್ಟ್ ಕಡ್ಡಾಯ. ಕೊವೀಡ್ ಪರೀಕ್ಷಾ ತಪಾಸಣೆಗೆ ಒಳಗಾಗಿ ನೆಗೆಟಿವ್ ವರದಿ ಬರುವವರಿಗೆ ಕಾರ್ಯಕ್ರಮಕ್ಕೆ ಭಾಗವಹಿಸಲು ಪೊಲೀಸ್ ಇಲಾಖೆ ಪಾಸ್ ನೀಡಲಿದೆ' ಎಂದು ತಿಳಿಸಿದರು.
ನಂತರ ಮಾತನಾಡಿ, 'ಕರಗ ಹೋಗುವಂತಹ ಸಂದರ್ಭದಲ್ಲಿ ಒಂದೆಡೆ ನಿಂತು ಪೂಜೆ ಮಾಡುವಂತಿಲ್ಲ. ಜನದಟ್ಟಣೆಗೆ ಅವಕಾಶ ಕಲ್ಪಿಸದೆ ಸಾಂಪ್ರದಾಯಿಕ ವಿಧಿಗಳಿಗೆ ಅಡ್ಡಿಯಾಗದಂತೆ ಕಾರ್ಯಕ್ರಮ ನಡೆಸಲು ದೇವಾಲಯ ಸಮಿತಿಯೊಂದಿಗೆ ಚರ್ಚಿಸಿದ್ದೇವೆ. ನೆಗೆಟಿವ್ ವರದಿ ಸರ್ಟಿಫಿಕೇಟ್ ಹೊಂದಿದ್ದರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಡಿಕೇರಿ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ನಗರಸಭೆ ಆಯುಕ್ತರಿಗೆ ಸೂಚಿಸಿದ್ದೇವೆ. ಅದರಂತೆ ಅವರು ಟೆಂಡರ್ ಕರೆದು ಶೀಘ್ರದಲ್ಲೇ ಕಾರ್ಯಪ್ರವೃತ್ತರಾಗುತ್ತಾರೆ' ಎಂದರು.
'ಅಕ್ಟೋಬರ್ 17 ಮತ್ತು 26 ರಂದು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗುವುದು. ಇದಕ್ಕೆ ಪ್ರವಾಸಿಗರು ಸಹಕರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಯಂತೆ ಹೋಂ ಸ್ಟೇ, ರೆಸಾರ್ಟ್ ತೆರೆಯಲು ಅನುಮತಿ ನೀಡಲಾಗಿದೆ. ಅಂತಹ ಮಾರ್ಗಸೂಚಿಗಳನ್ನು ಪಾಲಿಸದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಂದಾಯ ಮತ್ತು ಪೊಲೀಸ್ ಇಲಾಖೆಗಳು ಸನ್ನದ್ಧರಾಗಿರುತ್ತಾರೆ' ಎಂದು ಡಿಸಿ ಎಚ್ಚರಿಸಿದರು.
'ತೀರ್ಥೋದ್ಭವದ ಬಳಿಕ ದೇವಾಲಯ ಎಂದಿನಂತೆ ತೆರೆದಿರುತ್ತದೆ. ತಲಕಾವೇರಿಯಲ್ಲಿ ಅನ್ನದಾನ ಹಾಗೂ ಬೀದಿ ಅಂಗಡಿಗಳ ತೆರೆಯಲು ಅವಕಾಶ ಇರುವುದಿಲ್ಲ. ಹೆಚ್ಚು ಜನರು ಬರುವ ಸಾಧ್ಯತೆ ಇದ್ದರೆ ಸೆಕ್ಷನ್ 144 ಜಾರಿ ಮಾಡಲು ಚಿಂತನೆ ನಡೆಸುತ್ತೇವೆ ಎಂದ ಅವರು, ದೇಶದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಆರ್ಟಿಪಿಸಿಆರ್ ಹಾಗೂ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ನಲ್ಲಿ ಶೇ 100 ರಲ್ಲಿ 18 ಜನರಿಗೆ ಪಾಸಿಟಿವ್ ವರದಿಗಳು ಪತ್ತೆಯಾಗುತ್ತಿವೆ. ಈ ತಿಂಗಳು ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಆದ್ದರಿಂದ ಮರಣದ ಪ್ರಮಾಣಗಳು ಹೆಚ್ಚುತ್ತಿವೆ' ಎಂದು ತಿಳಿಸಿದರು.