ಕಲಬುರಗಿ: ಚಿತ್ತಾಪುರ ತಾಲೂಕಿನ ಲಾಡ್ಲಾಪೂರ ಗ್ರಾಮದಲ್ಲಿ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ ಕುಟುಂಬಗಳು ಶಿವರಾತ್ರಿಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಇಲ್ಲಿನ ಪ್ರಸಿದ್ಧ ಹಾಜಿಸರ್ವರ್(ಹಾದಿಶರಣ) ಬೆಟ್ಟದಲ್ಲಿ ಶಿವರಾತ್ರಿ ನಿಮಿತ್ತ ಲಕ್ಷದೀಪೋತ್ಸವ ಹಾಗೂ ಜಾಗರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ರಾಮದ ಹಿಂದು-ಮುಸ್ಲಿಂ ಸಮುದಾಯದವರು ಭೇದಭಾವ ಮರೆತು ಜಾಗರಣೆಯಲ್ಲಿ ಪಾಲ್ಗೊಂಡಿದ್ದರು. ಹಿಂದೂ ಮಹಿಳೆಯರ ಜೊತೆಗೂಡಿ ಮುಸ್ಲಿಂ ಸಮುದಾಯ ಮಹಿಳೆಯರೂ ಸಹ ದೀಪ ಬೆಳಗುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು.
ಭಾವೈಕ್ಯತೆಯ ತವರೂರು ಎಂದು ಕರೆಸಿಕೊಳ್ಳುವ ಲಾಡ್ಲಾಪೂರ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ ಗ್ರಾಮದ ಉಭಯ ಸಮುದಾಯದ ಬಾಂಧವರು ಒಂದಾಗಿ ಜಾತ್ರಾ ಮಹೋತ್ಸವವನ್ನು ಸಡಗರದಿಂದ ಆಚರಿಸುತ್ತಾರೆ. ಮುಸ್ಲಿಮರು ಹಾಜಿಸರ್ವರ್ ಎಂದರೆ, ಹಿಂದೂಗಳು ಹಾದಿಶರಣ ಎಂದು ನಂಬುತ್ತಾರೆ.