ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಫಲವಾಗಿ ಭಾರತ ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೆ ಹೈದರಾಬಾದ್ ಪ್ರಾಂತ್ಯಕ್ಕೆ ಒಂದು ವರ್ಷ ತಡವಾಗಿ ಅಂದರೆ 1948ರ ಸೆಪ್ಟೆಂಬರ್ 17 ರಂದು ಸ್ವಾತಂತ್ರ್ಯ ದೊರೆಯಿತು. ಆಗಿನ ಹೈದರಾಬಾದ್ ಕರ್ನಾಟಕ ಹಾಗೂ ಈಗ ಮರು ನಾಮಕರಣಗೊಂಡಿರುವ ಕಲ್ಯಾಣ ಕರ್ನಾಟಕ ವಿಮೋಚನೆಗೂ ಸಾಕಷ್ಟು ರಕ್ತ - ಸಿಕ್ತವಾದ ಇತಿಹಾಸವಿದೆ.
1947ರ ಅ.15 ರಂದು ಭಾರತ ದೇಶ ಸ್ವತಂತ್ರವಾಯಿತು. ದೇಶದ ಹಲವು ರಾಜರು ಭಾರತದ ಒಕ್ಕೂಟಕ್ಕೆ ತಮ್ಮ ರಾಜ್ಯವನ್ನು ಸೇರಿಸಿದರು. ಹೈದರಾಬಾದ್ ಪ್ರಾಂತ್ಯದ ರಾಜ ನಿಜಾಮ ಭಾರತದ ಒಕ್ಕೂಟಕ್ಕೆ ಸೇರಲು ಒಪ್ಪದೇ ಸ್ವತಂತ್ರ ಆಡಳಿತ ನಡೆಸುವುದಾಗಿ ಘೋಷಿಸಿಕೊಂಡಿದ್ದ.
ಇದರಿಂದಾಗಿ ಹೈದರಾಬಾದ್ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸ್ವತಂತ್ರವಾಗಲಿಲ್ಲ. ನಿಜಾಮನ ನಿರ್ಧಾರ ಹೈದರಾಬಾದ್ ಪ್ರಾಂತ್ಯದ ಜನರನ್ನು ರೊಚ್ಚಿಗೆಬ್ಬಿಸಿತು. ಭಾರತ ಒಕ್ಕೂಟಕ್ಕೆ ಸೇರಿಸಲು ಈ ಭಾಗದಲ್ಲಿ ಮತ್ತೊಂದು ಸ್ವಾತಂತ್ರ್ಯದ ಚಳುವಳಿ ನಡೆಯಿತು. ಇಲ್ಲಿಯೂ ಸಾಕಷ್ಟು ಜೀವಗಳು ಬಲಿಯಾದವು.
ರಜಾಕರ ಪಡೆ ಪ್ರವೇಶ: ಈ ಭಾಗದ ಬಹುತೇಕರು ಭಾರತದ ಒಕ್ಕೂಟ ಸೇರುವ ಬಯಕೆ ಹೊಂದಿದ್ದರು. ಹೋರಾಟ ಕೂಡಾ ನಡೆಸಿದ್ದರು. ಅವರ ಕೂಗು ಹತ್ತಿಕ್ಕಲು, ಹೋರಾಟ ಬಗ್ಗು ಬಡಿಯಲು ನಿಜಾಮ ತನ್ನ ಖಾಸಗಿ ಸೈನ್ಯ ರಜಾಕರ ಪಡೆ ಸಜ್ಜುಗೊಳಿಸಿದನು. ವಿಮೋಚನಾ ಹೋರಾಟ ಹತ್ತಿಕ್ಕಲು ತನ್ನ ಬಲಗೈ ಬಂಟ ಖಾಸಿಂ ರಜ್ವಿ ಎಂಬ ಮತಾಂಧನಿಗೆ ನಿಜಾಮ ಸಂಪೂರ್ಣ ಸ್ವತಂತ್ರ ನೀಡಿದ.
1947ರ ಜುಲೈ ತಿಂಗಳಲ್ಲಿ ನಿಜಾಮ, ಹೋರಾಟನಿರತರ ಬಂಧನಕ್ಕೆ ಆದೇಶ ಹೊರಡಿಸಿದ. ಸ್ವಾತಂತ್ರ್ಯ ಸೇನಾನಿಗಳನ್ನು ಬಂಧಿಸಿ ನಿಜಾಮನ ಸಾರ್ವಭೌಮತ್ವ ಸಂರಕ್ಷಿಸುವ ಜವಾಬ್ದಾರಿ ಹೊತ್ತ ರಜಾಕಾರರು ಮೂರು ಸಾವಿರಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಹಾಕಿದರು. ಜೈಲುಗಳು ತುಂಬಿ ಹೋದವು. ನಿಜಾಮನ ಈ ನಿರ್ಧಾರ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಯ್ತು. ಆಗ ಸಮಾರೋಪಾದಿಯಲ್ಲಿ ಜನರು ವಿಮೋಚನಾ ಚಳವಳಿಗೆ ಧುಮುಕಿದರು. ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಚಳವಳಿಗಳು ನಡೆದವು.
ಹಬ್ಬದ ಹೆಸರಲ್ಲಿ ಜನರನ್ನು ಸೇರಿಸಿದ ಹೋರಾಟಗಾರರು: ನಿಜಾಮನ ರಜಾಕರ ಪಡೆ ವಿರುದ್ಧ ಹೋರಾಟ ತೀವ್ರ ಗತಿಯಾಯಿತು. ಕಲಬುರಗಿಯ ಕೊಲ್ಲೂರು ಮಲ್ಲಪ್ಪ, ಚಂದ್ರಶೇಖರ್ ಪಾಟೀಲ, ಡಿ.ಆರ್.ಅವರಾದಿ, ಜಗನ್ನಾಥ್ ರಾವ್ ಚಂಡ್ರಕಿ, ಚಟ್ನಹಳ್ಳಿ ವೀರಣ್ಣ, ಬೀದರ್ ಜಿಲ್ಲೆಯ ಎಸ್.ಬಿ.ಅವದಾನಿ, ಯಾದಗಿರಿಯ ವಿಶ್ವನಾಥ ರೆಡ್ಡಿ ಮುದ್ನಾಳ, ಕೊಪ್ಪಳದ ಜೆ.ಕೆ.ಪ್ರಾಣೇಶಾಚಾರ್, ಬಂಗಾರಶೆಟ್ಟಿ, ಚಿಟಗುಪ್ಪದ ಹಕೀಕತರಾವ್ ಸೇರಿದಂತೆ ಮೊದಲಾದವರು ಹೋರಾಟ ನಡೆಸಿದರು.
ಸಾಕಷ್ಟು ಬಾರಿ ಬಂಧನಕ್ಕೊಳಗಾಗಿ ಜೈಲು ಸೇರಿ ರಜಾಕರಿಂದ ಏಟು ತಿಂದರು. ಆದರು ಹೋರಾಟ ಮಾತ್ರ ಕೈಬಿಡಲಿಲ್ಲ. ಅಲ್ಲದೇ, ಗಣೇಶೋತ್ಸವ, ವಿಜಯ ದಶಮಿ ಹಬ್ಬಗಳ ನೆಪದಲ್ಲಿ ಜನರನ್ನು ಒಂದೆಡೆ ಸೇರಿಸಿ ವಿಮೋಚನೆಯ ಬಗ್ಗೆ ಜನರಿಗೆ ತಿಳಿಹೇಳುವ ಕೆಲಸ ಮಾಡುತ್ತಿದ್ದರು.
ಮರೆಯಲಾಗದ ಗೋರ್ಟಾ ಹತ್ಯಾಕಾಂಡ: ಹೈದರಾಬಾದ ವಿಮೋಚನಾ ಹೋರಾಟದಲ್ಲಿ ಪ್ರಮುಖ ಘಟ್ಟವಾಗಿರುವುದು 1948ರ ಮೇ 9ರಂದು ಬೀದರ್ ಜಿಲ್ಲೆಯ ಗೋರ್ಟಾ ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯ ಸೇನಾನಿಗಳ ಹತ್ಯಾಕಾಂಡ. ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಬಾವುರಾವ ಪಾಟೀಲ ಹಾಗೂ ವಿಠೋಬಾ ನಿರೋಡೆ ಗೋರ್ಟಾ ಗ್ರಾಮದಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸಿದ್ದರು.
ಈ ವೇಳೆ, ರಜಾಕರರ ಸಹಪಾಠಿ ಆ ಧ್ವಜ ಇಳಿಸಿದ್ದಲ್ಲದೇ ಬಾವುರಾವ ಪಾಟೀಲರಿಗೆ ಅವಮಾನ ಮಾಡಿದ್ದರು. ಅಲ್ಲದೇ, ಪಾಟೀಲರ ಮನೆ ಲೂಟಿ ಮಾಡಿದರು. ಅವಮಾನ, ಮನೆ ಲೂಟಿಯಿಂದ ಆಕ್ರೋಶಗೊಂಡ ಬಾವುರಾವ ಪಾಟೀಲ, ರಜಾಕರರ ಸಹಪಾಠಿ ಇಸಾಮುದ್ದೀನನ್ನು ಕೊಂದು ಹಾಕಿದ್ದರು. ಇತ್ತ ಇಸಾಮುದ್ದೀನ್ ಕೊಲೆ ರಜಾಕರರನ್ನು ಕೆರಳಿಸಿತು.
ಗೋರ್ಟಾ ಗ್ರಾಮದ ಮಹಾದೇವಪ್ಪ ಡುಮಣಿ ಎಂಬ ಸಾಹುಕಾರರ ಮನೆ ಅಬೇಧ್ಯ ಕೋಟೆಯಾಗಿತ್ತು. ಹೀಗಾಗಿ ಅಲ್ಲಿ ನೂರಾರು ಜನ ಸ್ವಾತಂತ್ರ್ಯ ಸೇನಾನಿಗಳು ಆಶ್ರಯ ಪಡೆಯುತ್ತಿದ್ದರು. ರಜಾಕರು ದಾಳಿ ವೇಳೆ ಅಲ್ಲಿ 800ಕ್ಕೂ ಹೆಚ್ಚು ಜನರು ಸೇನಾನಿಗಳು ಇದ್ದರು ಎನ್ನಲಾಗಿದೆ. ಇಸಾಮುದ್ದೀನ್ನ ಕೊಲೆ ಸೇಡು ತೀರಿಸಿಕೊಳ್ಳಲು ಆತನ ಅಣ್ಣ ಚಾಂದ್ ಪಟೇಲ್ ರಜಾಕಾರ ಪಡೆಯ ನೇತೃತ್ವ ವಹಿಸಿ ಗೋರ್ಟಾ ಗ್ರಾಮ ಗುರಿಯಾಗಿಸಿಕೊಂಡು ದಾಳಿ ಮಾಡಿ ಎಲ್ಲರನ್ನು ಹತ್ಯೆ ಮಾಡಿದ ಎಂಬ ಕರಾಳ ಇತಿಹಾಸವಿದೆ.
ಭಾರತ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್: ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡದಿಂದ ಸಹನೆ ಕಳೆದುಕೊಂಡ ಸೇನಾನಿಗಳು ಪ್ರತಿಕಾರವಾಗಿ ಹಲವು ರಜಾಕಾರರನ್ನು ಕೊಂದು ಹಾಕಿದರು. ಇದರಿಂದ ಮತಾಂಧನಾಗಿದ್ದ ರಜ್ವಿಗೆ ರೊಚ್ಚಿಗೆದ್ದ, ರಕ್ತದೋಕುಳಿಯೇ ಹರಿಸಿಬಿಟ್ಟ. ಎಲ್ಲಡೆ ಕೊಲೆ, ಸುಲಿಗೆ, ಅತ್ಯಾಚಾರಗಳು ಹೆಚ್ಚಾದವು.
ಆಗ ಹೋರಾಟಗಾರರು ಅಂದಿನ ಗೃಹ ಮಂತ್ರಿ, ಭಾರತ ಏಕೀಕರಣದ ರೂವಾರಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಭೇಟಿಯಾದರು. ಪಟೇಲ್ ಅವರು ಖಾಸಿಂ ರಜ್ವಿಯ ಮಟ್ಟ ಹಾಕೋಕೆ ಸೇನಾ ಕಾರ್ಯಚರಣೆಗೆ ಯೋಜನೆ ರೂಪಿಸಿದರು.
ಅಡ್ಡಿಯಾದ ಒಪ್ಪಂದ - ಅಂಬೇಡ್ಕರ್ ಉಪಾಯ: ಭಾರತ ಸರ್ಕಾರ ಮತ್ತು ನಿಜಾಮನ ಮಧ್ಯೆ ನಡೆದಿದ್ದ ಗಡಿ ಒಪ್ಪಂದ ಸ್ಟ್ಯಾಂಡ್ ಸ್ಲಿಲ್ ಅಗ್ರಿಮೆಂಟ್ ಪ್ರಕಾರ ಭಾರತೀಯ ಸೇನೆ ಹೈದರಾಬಾದ್ ಸರ್ಕಾರಕ್ಕೆ ಮುಟ್ಟುವಂತಿರಲಿಲ್ಲ. ಇದು ಕಾರ್ಯಚರಣೆಗೆ ಅಡ್ಡವಾಗಿ ಸೇನೆಯನ್ನು ಇಳಿಸಲು ಆಗಲಿಲ್ಲ.
ಆಗ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸೇರಿ 'ಆಪರೇಷನ್ ಪೊಲೋ' ಹೆಸರಿನಲ್ಲಿ ಪೊಲೀಸ್ ಕಾರ್ಯಚರಣೆ ನಡೆಸಿ ಹೈದರಾಬಾದ್ ನಿಜಾಮನ ಹುಟ್ಟಡಗಿಸಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಚತುರತೆ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗುಂಡಿಗೆಯಿಂದ ಹೈದರಾಬಾದ್ ಕರ್ನಾಟಕ ವಿಮೋಚನೆಗೊಂಡಿದೆ ಎಂದು ಇತಿಹಾಸದ ಪುಟಗಳು ಸಾರಿ ಹೇಳುತ್ತಿವೆ.
ಭಾರತ ಸರ್ಕಾರದ ಮುಂದೆ ಶರಣಾದ ನಿಜಾಮ: ಪಟೇಲರು ಪೊಲೀಸ್ ಕಾರ್ಯಾಚರಣೆ ನಡೆಸುವ ಮೂಲಕ ನಿಜಾಮನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದರು. ತಾನಾಗಿಯೇ ತನ್ನ ಸೋಲು ಒಪ್ಪಿಕೊಂಡ ನಿಜಾಮ 1948ರ ಸೆ.17ಕ್ಕೆ ಭಾರತ ಒಕ್ಕೂಟಕ್ಕೆ ಹೈದರಾಬಾದ್ ಸಂಸ್ಥಾನವನ್ನು ಒಪ್ಪಿಸಿದ. ಅಂದು ಸಹಸ್ರಾರು ಜನರು ರಕ್ತಹರಿಸಿದ ಪರಿಣಾಮ ಇಂದು ಹೈದರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ವಿಮೋಚನೆ ಸಿಕ್ಕು ಅಮೃತ ಮಹೋತ್ಸವವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.
ಏಳು ದಶಕ ಕಳೆದರೂ ಮುಂದುವರೆದ ಅಸಮತೋಲನ: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳು ಗತಿಸುತ್ತಿದೆ. ಆದರೆ, ಹೇಳಿಕೊಳ್ಳುವಂತ ಬದಲಾವಣೆ ಆಗಿಲ್ಲ ಅನ್ನೋದು ಈ ಭಾಗದ ಜನರ ಅಸಮಾಧಾನದ ಮಾತು. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಎನ್. ಧರ್ಮಸಿಂಗ್ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹೈದರಾಬಾದ್ ಕರ್ನಾಟಕ ಅಸಮತೋಲನ ಸರಿದೂಗಿಸಲು 371 (ಜೆ) ವಿಧೇಯಕ ಒದಗಿಸುವಲ್ಲಿ ಸಫಲರಾದರು.
ಮಾಜಿ ಸಚಿವ ವೈಜನಾಥ ಪಾಟೀಲ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಸೇರಿದಂತೆ ನೂರಾರು ಜನರ ಹೋರಾಟದ ಫಲವಾಗಿ ಈಗ 371(ಜೆ) ಕಲಂ ಜಾರಿಯಾಗಿದೆ. ನಂತರ ಬಿಎಸ್ ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದ ಪರಿಣಾಮ ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ. ಸದ್ಯ ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಗಿದ್ದು ಹೊರತುಪಡಿಸಿದರೆ, ಅಭಿವೃದ್ದಿಯಲ್ಲಿ ಮಾತ್ರ ಕಲ್ಯಾಣ ಆಗುತ್ತಿಲ್ಲ ಎಂಬ ಜನರ ಆರೋಪ ಮುಂದುವರೆದಿದೆ.
ಇದನ್ನೂ ಓದಿ: ಸೆ.17 ಹೈದರಾಬಾದ್ ವಿಮೋಚನಾ ದಿನ: ರಜಾಕಾರರ ರಕ್ತಸಿಕ್ತ ಇತಿಹಾಸ, ಹೋರಾಟದ ಹೆಜ್ಜೆಗುರುತುಗಳು