ಕಲಬುರಗಿ: ಸಾವರ್ಕರ್ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ವೀರ ಸಾವರ್ಕರ್ಗೆ ಭಾರತ ರತ್ನ ಕೊಡಬೇಕೆಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ರವಿಕುಮಾರ್, ಸಿದ್ದರಾಮಯ್ಯನವರು ಮಹಾತ್ಮ ಗಾಂಧೀಜಿ ಹತ್ಯೆಗೆ ಸಾವರ್ಕರ್ ಸಂಚು ರೂಪಿಸಿದ್ದರೆಂದು ಹೇಳಿಕೆ ನೀಡಿದ್ದಾರೆ. ಇವರೇನು ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ತನಿಖೆ ಮಾಡಿದ್ದಾರಾ?. ಮಹಾತ್ಮ ಗಾಂಧಿ ಹತ್ಯೆಯಲ್ಲಿ ಸಾವರ್ಕರ್, ಆರ್ಎಸ್ಎಸ್ ಪಾತ್ರ ಇಲ್ಲ ಅಂತ ನ್ಯಾಯಾಲಯವೇ ಸ್ಪಷ್ಟನೆ ನೀಡಿದೆ. ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಈ ರೀತಿ ಹೇಳಿಕೆ ನೀಡಲು. ಸ್ವಾತಂತ್ರ್ಯ ಹೋರಾಟದ ಗಂಧ ಗಾಳಿಯು ಗೊತ್ತಿಲ್ಲ. ಸಿದ್ದರಾಮಯ್ಯ ಇನ್ನೊಮ್ಮೆ ಸ್ವಾತಂತ್ರ್ಯ ಹೋರಾಟ ಬಗ್ಗೆ ಓದಿ ತಿಳಿದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಕುಮಾರ ಸ್ವಾಮಿಗಳು ಭಾರತ ರತ್ನ ಪ್ರಶಸ್ತಿಗಿಂತಲೂ ದೊಡ್ಡವರು:
ಇದೇ ವೇಳೆ ಸಿದ್ದರಾಮಯ್ಯನವರು ಸಿದ್ದಗಂಗೆಯ ಲಿಂಗೈಕ್ಯ ಶಿವಕುಮಾರ ಸ್ವಾಮಿ ಅವರಿಗೆ ಭಾರತ ರತ್ನ ನೀಡಬೇಕು ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ರವಿಕುಮಾರ್, ಶಿವಕುಮಾರ ಸ್ವಾಮಿಗಳು ಭಾರತ ರತ್ನಕ್ಕಿಂತಲೂ ದೊಡ್ಡವರು. ಅವರಿಗೆ ಭಾರತ ರತ್ನ ನೀಡುವ ಕುರಿತು ನಾವು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ ಎಂದರು. ಇನ್ನು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಐವತ್ತು ಸೀಟು ಗೆಲ್ಲೋದಿಲ್ಲ. ಐವತ್ತಕ್ಕಿಂತ ಹೆಚ್ಚು ಸೀಟ್ ಗೆದ್ರೆ ನಾನು ರಾಜೀನಾಮೆ ಕೊಡ್ತೀನಿ ಎಂದು ಸವಾಲು ಹಾಕಿದರು. ಐವತ್ತಕ್ಕಿಂತ ಕಡಿಮೆ ಸೀಟ್ ಬಂದ್ರೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ? ಎಂದು ಬಹಿರಂಗವಾಗಿ ಸವಾಲೆಸೆದರು.