ಕಲಬುರಗಿ: ಅಭಿವೃದ್ಧಿ ವಿಷಯದಲ್ಲಿ ಆಳಂದ ಶಾಸಕರಾದ ಸುಭಾಷ್ ಗುತ್ತೇದಾರ ಅವರು ರಾಜಕೀಯ ದ್ವೇಷ ಮಾಡುತ್ತಿದ್ದಾರೆ ಎಂದು ಅಹಿಂದ ಚಿಂತಕರ ವೇದಿಕೆ ಆರೋಪಿಸಿದೆ.
ನಗರದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಸಾಯಿಬಣ್ಣ ಜಮಾದಾರ, ಮತದಾರರು ತನಗೆ ಕಡಿಮೆ ಮತ ಹಾಕಿದ್ದಾರೆ ಎಂದು ಅನೇಕ ಹಳ್ಳಿಗಳ ಅಭಿವೃದ್ಧಿಯನ್ನು ಸುಭಾಷ್ ಗುತ್ತೇದಾರ ನಿರ್ಲಕ್ಷಿಸುತ್ತಿದ್ದಾರೆ. ಆಳಂದ ತಾಲೂಕಿನ ನಿಂಬರ್ಗಾ, ಬಟ್ಟರಗಾ, ದಂಗಾಪುರ ಸೇರಿದಂತೆ ಹಲವಾರು ಹಳ್ಳಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಶಾಸಕರು ವಿಫಲವಾಗಿದ್ದಾರೆ ಎಂದು ದೂರಿದರು.
ತಾಲೂಕಿನ ಅಭಿವೃದ್ಧಿ ವಿಷಯವಾಗಿ ಅಹಿಂದ ಚಿಂತಕರ ವೇದಿಕೆ ಸಂಘಟನೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಸಿಎಂ ಗಮನಕ್ಕೆ ತಂದರು ಕೂಡ ಕವಡೆಕಾಸಿನ ಕಿಮ್ಮತ್ತು ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಕೂಡಲೇ ಪಕ್ಷಪಾತ ಧೋರಣೆ ಕೈಬಿಟ್ಟು, ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.