ಕಲಬುರಗಿ: ಗುಲ್ಬರ್ಗಾ ವಿಧಾನಸಭಾ ಕ್ಷೇತ್ರವನ್ನು 2008ರಲ್ಲಿ ಒಡೆದು ದಕ್ಷಿಣ ಹಾಗೂ ಉತ್ತರ ಕ್ಷೇತ್ರವಾಗಿ ಪುನರ್ವಿಂಗಡಣೆ ಮಾಡಲಾಯಿತು. ಅಂದಿನಿಂದ ಹೊಸದಾಗಿ ಕಲಬುರಗಿ ದಕ್ಷಿಣ ಮತಕ್ಷೇತ್ರ ಜನ್ಮ ತಾಳಿತು. ವಿಂಗಡಣೆಯ ಬಳಿಕ ದಕ್ಷಿಣ ಕ್ಷೇತ್ರ ರೇವೂರ ಕುಟುಂಬದ ಹಿಡಿತದಲ್ಲಿದೆ. ಹ್ಯಾಟ್ರಿಕ್ ಬಾರಿಸಲು ಮತ್ತೊಮ್ಮೆ ಬಿಜೆಪಿಯಿಂದ ದತ್ತಾತ್ರೇಯ ಪಾಟೀಲ್ ರೇವೂರ ಕಣಕ್ಕಿಳಿದಿದ್ದಾರೆ. ರೇವೂರ ಕುಟುಂಬದಿಂದ ಕ್ಷೇತ್ರ ಕಸಿದುಕೊಂಡು ತಮ್ಮ ಮಡಿಲಿಗೆ ಹಾಕಿಕೊಳ್ಳಲು ಕೈ ಪಕ್ಷವು ಅಲ್ಲಮ ಪ್ರಭು ಪಾಟೀಲ್ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್ ಅಧಿಕೃತ ಅಭ್ಯರ್ಥಿಯ ಹೆಸರು ಇನ್ನೂ ಘೋಷಣೆ ಮಾಡದೆ ಕಾಯುವ ತಂತ್ರಗಾರಿಕೆ ಅನುಸರಿಸುತ್ತಿದೆ. ಆಮ್ ಆದ್ಮಿ, ಕೆಆರ್ಎಸ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳೂ ಸಹ ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿವೆ.
ಎರಡು ಕುಟುಂಬಗಳ ನಡುವೆ ಪೈಪೋಟ: ತೊಗರಿ ಕಣಜ, ಬಿಸಿಲ ನಾಡು, ಅಂದಿನ ಗುಲಬರ್ಗವೇ ಇಂದಿನ ಕಲಬುರಗಿಯ ದಕ್ಷಿಣ ವಿಧಾನಸಭಾ ಕ್ಷೇತ್ರ. ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸಲು ಬಿಜೆಪಿ ನಾಯಕ ದಿ. ಚಂದ್ರಶೇಖರ ಪಾಟೀಲ್ ಹಾಗೂ ಕಾಂಗ್ರೆಸ್ ನಾಯಕ ದಿ. ಖಮರುಲ್ ಇಸ್ಲಾಂ ಮಧ್ಯೆ ಭಾರಿ ಪೈಪೋಟಿ ನಡೀತಿತ್ತು. 2008ರ ಬಳಿಕ ಕ್ಷೇತ್ರ ವಿಂಗಡಣೆಯಲ್ಲಿ ಕಲಬುರಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರ ರಚಣೆಯಿಂದ ಇಬ್ಬರು ನಾಯಕರಿಗೆ ವರ ಸಿಕ್ಕಂತಾಯಿತು. ಮುಸ್ಲಿಂ ಸಮುದಾಯ ಹೆಚ್ಚಿರುವ ಉತ್ತರ ಕ್ಷೇತ್ರದಲ್ಲಿ ಖಮರುಲ್ ಇಸ್ಲಾಂ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಚಂದ್ರಶೇಖರ ಪಾಟೀಲ್ ರೇವೂರ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಅದು ಇಂದಿಗೂ ಮುಂದುವರೆದುಕೊಂಡು ಬಂದಿದೆ.
2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಚಂದ್ರಶೇಖರ್ ಪಾಟೀಲ್ ರೇವೂರ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಎಚ್ಕೆಇ ಸೊಸೈಟಿಯ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಅವರನ್ನು ಅಖಾಡಕ್ಕಿಳಿಸಿತ್ತು. ಭೀಮಳ್ಳಿ ಅವರನ್ನು 14,290 ಅಂತರದಿಂದ ಸೋಲಿಸಿದ ರೇವೂರ ಗೆಲುವು ಸಾಧಿಸಿದ್ದರು. ಒಂದೊಮ್ಮೆ ಕಲಬುರಗಿಯ ಎನ್.ವಿ.ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಯಡಿಯುರಪ್ಪ ವಿರುದ್ಧ ಚಂದ್ರಶೇಖರ ಪಾಟೀಲ್ ಗುಟುರು ಹಾಕಿದ್ದರು. ರಾಜ್ಯಮಟ್ಟದ ನಾಯಕನಿಗೆ ರೇವೂರ ಗುಡುಗು ಮಾಡಿದ್ದು ಇಡೀ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿತ್ತು.
2010ರಲ್ಲಿ ಹಾಲಿ ಶಾಸಕರಾಗಿದ್ದ ಚಂದ್ರಶೇಖರ ಪಾಟೀಲ್ ರೇವೂರ ಹೃದಯಾಘಾತಕ್ಕೆ ಬಲಿಯಾಗಿ ಇಹಲೋಕ ತ್ಯಜಿಸಿದ್ದರು. ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಉಪ ಚುನಾವಣೆಯಲ್ಲಿ ರೇವೂರ್ ಕುಟುಂಬಕ್ಕೆ ಟಿಕೆಟ್ ಕೊಡಲು ಕೇಸರಿ ಪಕ್ಷ ನಿರಾಕರಿಸಿತು. ಶಶೀಲ್ ನಮೋಶಿ ಎನ್ನುವವರಿಗೆ ಟಿಕೆಟ್ ನೀಡಲಾಗಿತ್ತು. ಆಗ ಹೆಚ್.ಡಿ.ಕುಮಾರಸ್ವಾಮಿ ಅವರು ರೇವೂರ ಕುಟುಂಬದ ಕೈ ಹಿಡಿದರು. ಚಂದ್ರಶೇಖರ ಪಾಟೀಲ್ ರೇವೂರ ಪತ್ನಿ ಅರುಣಾ ಸಿ.ಪಾಟೀಲ್ ಜಾತ್ಯತೀತ ಜನತಾ ದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ 39,430 ಮತಗಳನ್ನು ಗಳಿಸಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರನ್ನು ಸೋಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಅಜಯ್ ಸಿಂಗ್ ಮೂರನೇ ಸ್ಥಾನದಲ್ಲಿದ್ದರು. ಚಂದ್ರಶೇಖರ ಪಾಟೀಲ್ ರೇವೂರ ನಿಧನದಿಂದ ಅನುಕಂಪದ ಮೇಲೆ ಮತ ಕೇಳಿದಾಗ ಕ್ಷೇತ್ರದ ಮತದಾರರು ರೇವೂರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದನ್ನು ಇಲ್ಲಿ ಸ್ಮರಿಸಬಹುದು.
2013ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ರೇವೂರ ಕುಟುಂಬ ಮರಳಿ ಬಿಜೆಪಿಗೆ ಸೇರಿತು. ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಬಿಜೆಪಿ ಟಿಕೆಟ್ ಮಿಸ್ ಆಗಿದ್ದರಿಂದ ನಮೋಶಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ಪಕ್ಷ ಮಾಜಿ ಸಿಎಂ ವೀರೇಂದ್ರ ಪಾಟೀಲ್ ಪುತ್ರ ಕೈಲಾಶ್ ವಿ.ಪಾಟೀಲರನ್ನು ಕಣಕ್ಕಿಳಿಸಿತ್ತು. ಆ ವರ್ಷದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ದತ್ತಾತ್ರೇಯ ಪಾಟೀಲ್ ರೇವೂರ 36,850 ಮತಗಳನ್ನು ಪಡೆದು, ಜೆಡಿಎಸ್ ಅಭ್ಯರ್ಥಿ ನಮೋಶಿ ಅವರನ್ನು 9,970 ಮತಗಳ ಅಂತರದಿಂದ ಸೋಲಿಸಿ ಜಯಶಾಲಿ ಆಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಕೈಲಾಶ್ ವಿ.ಪಾಟೀಲ್ 22,074 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
2018ರ ಚುನಾವಣೆಯಲ್ಲಿಯೂ ಕಮಲ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದ ದತ್ತಾತ್ತೇಯ ಪಾಟೀಲ್ ರೇವೂರ ಎರಡನೇ ಬಾರಿಗೆ ಜಯಭೇರಿ ಬಾರಿಸಿದರು. ಕೈಪಕ್ಷದಿಂದ ಕಣಕ್ಕಿಳಿದಿದ್ದ ಅಲ್ಲಮಪ್ರಭು ಪಾಟೀಲ್ ಬಿರುಸಿನ ಪೈಪೋಟಿ ನೀಡಿದ್ದರು. ರೇವೂರ್ 64,788 ಮತಗಳನ್ನು ಪಡೆದಿದ್ದರೆ, ಅಲ್ಲಮಪ್ರಭು ಪಾಟೀಲ್ 59,357 ಮತಗಳು ಪಡೆದಿದ್ದರು. 5,431 ಮತಗಳ ಅಂತರದಿಂದ ಅಲ್ಲಮಪ್ರಭು ಪಾಟೀಲ್ ಅವರನ್ನು ದತ್ತಾತ್ರೇಯ ಪಾಟೀಲ್ ರೇವೂರ ಪರಾಭವಗೊಳಿಸಿದ್ದರು.
ಕ್ಷೇತ್ರ ವಿಂಗಡಣೆಯಾದ ಬಳಿಕ 2008ರಿಂದ ಸತತ ಚಂದ್ರಶೇಖರ್ ಪಾಟೀಲ್ ರೇವೂರ್ ಕುಟುಂಬಸ್ಥರ ವಶದಲ್ಲಿ ದಕ್ಷಿಣ ಕ್ಷೇತ್ರವಿದೆ. 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್ ಬಾರಿಸಲು ಹಾಲಿ ಶಾಸಕ ದತ್ತಾತ್ರೇಯ ಪಾಟೀಲ್ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿ ದೊಡ್ಡದಾಗಿತ್ತು. ಆದ್ರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಲ್ಲಿನ ವಾಸ್ತವದ ಬಗ್ಗೆ ಅರಿವಿರುವ ಕಾರಣ 2018ರ ಚುನಾವಣೆಯಲ್ಲಿ ಕಠಿಣ ಪೈಪೋಟಿ ನೀಡಿದ ಅಲ್ಲಮಪ್ರಭು ಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದಾರೆ.
ಜಾತ್ಯತೀತ ಜನತಾದಳ ಇನ್ನೂ ಅಭ್ಯರ್ಥಿಯ ಹೆಸರು ಘೋಷಿಸಿಲ್ಲ. ಸದ್ಯಕ್ಕೆ ಜೆಡಿಎಸ್ ಯುವ ಮುಖಂಡ ಕೃಷ್ಣಾ ರೆಡ್ಡಿ ಕ್ಷೇತ್ರ ಸಂಚಾರದಲ್ಲಿ ತೊಡಗಿದ್ದು ಪ್ರಬಲ ಆಕಾಂಕ್ಷಿ ಆಗಿದ್ದಾರೆ. ಬದಲಾದ ರಾಜಕೀಯ ವಾತಾವರಣದಲ್ಲಿ ಕೃಷ್ಣಾ ರೆಡ್ಡಿಗೆ ಟಿಕೆಟ್ ಸಿಗಬಹುದು ಇಲ್ಲವೇ ಸಿಗದೇ ಇರಬಹುದು ಅನ್ನೋದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ. ಅದರಂತೆ ಆಮ್ ಆದ್ಮಿ ಪಕ್ಷದಿಂದ ಸಾಮಾಜಿಕ ಹೋರಾಟಗಾರ ಸಿದ್ದು ಪಾಟೀಲ್ ಕಣಕ್ಕಿಳಿದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸಾಮಾಜಿಕ ಕಾರ್ಯಕರ್ತ ಹೆಚ್ಕೆಸಿಸಿಐ ಮುಖಂಡ ಶರಣು ಪಪ್ಪಾ ಪ್ರಚಾರ ನಡೆಸುತ್ತಿದ್ದಾರೆ. ಕೆಆರ್ಎಸ್ ಸೇರಿದಂತೆ ನಾನಾ ರಾಜಕೀಯ ಪಕ್ಷಗಳು ಸಂಘಟನೆಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕ್ಷೇತ್ರವನ್ನು ಮಡಿಲಿಗೆ ಹಾಕಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ. ಈ ಎಲ್ಲದರ ನಡುವೆ ಗೆಲುವಿನ ಹಾರ ಯಾರ ಕೊರಳಿಗೆ ಅನ್ನೋದು ಮೇ 13 ರಂದು ತಿಳಿದುಬರಲಿದೆ.
ಮತಗಳ ಲೆಕ್ಕಾಚಾರ: ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 2,72,820 ಮತದಾರರಿದ್ದಾರೆ. 1,35,393 ಪುರುಷರು ಮತ್ತು 1,37,427 ಮಹಿಳೆಯರಿದ್ದಾರೆ. ಲಿಂಗಾಯತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಕ್ಷೇತ್ರದ ಹಿನ್ನೋಟ: ಕಲ್ಯಾಣ-ಕರ್ನಾಟಕಕ್ಕೆ ಒಳಪಡುವ ಕ್ಷೇತ್ರವು ಗುಲ್ಬರ್ಗ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 2,63,662 ಮತದಾರರಿದ್ದರು. ಇದರಲ್ಲಿ 1,44,480 ಮತದಾರರು ಮತ ಚಲಾಯಿಸಿದ್ದರೆ 1,44,480 ಮತಗಳು ಮಾನ್ಯಗೊಂಡಿವೆ. ಇದೇ ಚುನಾವಣೆಯಲ್ಲಿ ಶೇ. 54.64 ಪುರುಷ ಮತ್ತು ಶೇ. 52.67 ಮಹಿಳಾ ಮತಗಳು ಚಲಾವಣೆಯಾಗಿವೆ. ಮಹಿಳಾ ಮತದಾರರು ಪುರುಷ ಮತದಾರರಿಗಿಂತ ಹೆಚ್ಚಿದ್ದು ಕ್ಷೇತ್ರದಲ್ಲಿ ಮತದಾರರ ಲಿಂಗಾನುಪಾತವು 1002 ಆಗಿತ್ತು. ಸದ್ಯದ ಚುನಾವಣೆಯಲ್ಲಿಯೂ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ. 1,35,393 ಪುರುಷ ಮತದಾರಿದ್ದರೆ 1,37,427 ಮಹಿಳಾ ಮತದಾರರು ಇರುವುದು ಗಮನಾರ್ಹ.
ಈವರೆಗೆ ಆಯ್ಕೆಯಾದ ಶಾಸಕರು: 1951ರ ಚುನಾವಣೆಯಿಂದ ಈವರೆಗೆ ನಡೆದ ಒಟ್ಟು ಚುನಾವಣೆಯಲ್ಲಿ ಹೆಚ್ಚೂ ಕಡಿಮೆ ಕಾಂಗ್ರೆಸ್ ಪಕ್ಷವೇ ಅಧಿಕಾರ ನಡೆಸಿದೆ ಎಂದು ಹೇಳಬಹುದು. ಈ ಮಧ್ಯೆ ಸಿಪಿಐ ಕಮ್ಯೂನಿಷ್ಟ್, ಜನತಾ ಪಾರ್ಟಿ, ಮುಸ್ಲಿಂ ಲೀಗ್ ಸೇರಿದಂತೆ ಹಲವು ಪಕ್ಷಗಳ ಶಾಸಕರು ಆಯ್ಕೆಯಾಗಿರುವುದನ್ನು ಗಮನಿಸಬಹುದು. 1951ರಲ್ಲಿ ಕಾಂಗ್ರೆಸ್ನಿಂದ ಮಹ್ಮದ್ ಅಲಿ ಮೇಹತಾಬ್ ಆಯ್ಕೆ ಆಗಿದ್ದರು. ಮೈಸೂರು ರಾಜ್ಯವಾಗಿ ಉದಯಿಸಿದಾಗ ಈ ಕ್ಷೇತ್ರದಲ್ಲಿ ಮತ್ತೆ 1957ರಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದರು. 1962ರಲ್ಲಿ ಸಿಪಿಐ ಕಮ್ಯೂನಿಷ್ಟ್ ಪಕ್ಷದಿಂದ ಗಂಗಾಧರ ನಮೋಶಿ,
1967ರಲ್ಲಿ ಕಾಂಗ್ರೆಸ್ನಿಂದ ಮಹ್ಮದ್ ಅಲಿ ಮೇಹತಾಬ್, 1972ರಲ್ಲಿಯೂ ಇದೇ ಮಹ್ಮದ್ ಅಲಿ ಮೇಹತಾಬ್ ಕಾಂಗ್ರೆಸ್ನಿಂದ ಗೆಲುವು ಸಾಧಿಸಿದ್ದರು.
ಗುಲಬರ್ಗಾ (ಕರ್ನಾಟಕ ರಾಜ್ಯ) ಜಿಲ್ಲೆಯಾಗಿ ಉದಯಿಸಿದ ಬಳಿಕ 1978ರಲ್ಲಿ ಖಮರುಲ್ ಇಸ್ಲಾಂ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆ ಆದರು. 1983ರಲ್ಲಿ ಜನತಾ ಪಾರ್ಟಿಯಿಂದ ಎಸ್.ಕೆ.ಕಾಂತಾ, 1985ರಲ್ಲಿ ಜನತಾ ಪಾರ್ಟಿಯಿಂದ ಎಸ್.ಕೆ.ಕಾಂತಾ, 1989ರಲ್ಲಿ ಮುಸ್ಲಿಂ ಲೀಗ್ನಿಂದ ಖಮರುಲ್ ಇಸ್ಲಾಂ, 1994ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಖಮರುಲ್ ಇಸ್ಲಾಂ ಆಯ್ಕೆ, 1996ರ ಉಪ ಚುನಾವಣೆಯಲ್ಲಿ ಜನತಾದಳದಿಂದ ಕೈಸರ್ ಮಹಿಮೂದ್ ಮಣಿಯಾರ್, 1999ರಲ್ಲಿ ಕಾಂಗ್ರೆಸ್ನಿಂದ ಮತ್ತೆ ಖಮರುಲ್ ಇಸ್ಲಾಂ, 2004ರಲ್ಲಿ ಬಿಜೆಪಿಯಿಂದ ಚಂದ್ರಶೇಖರ ಪಾಟೀಲ್ ರೇವೂರ ಮೊದಲ ಬಾರಿ ಗೆಲುವು ಕಂಡಿದ್ದರು. 2008 ರಲ್ಲಿ ಅಖಂಡ ಕಲಬುರಗಿ ವಿಧಾನಸಭೆ ಉತ್ತರ-ದಕ್ಷಿಣ ಕ್ಷೇತ್ರವಾಗಿ ವಿಂಗಡಣೆ ಆಗಿತು.
2008 : ಚಂದ್ರಶೇಖರ್ ಪಾಟೀಲ್ ರೇವೂರ್ - ಬಿಜೆಪಿ
2010 : (ಉಪಚುನಾವಣೆ) ಅರುಣಾ ಸಿ. ಪಾಟೀಲ್ ರೇವೂರ - ಜೆಡಿಎಸ್
2013 : ದತ್ತಾತ್ರೇಯ ಪಾಟೀಲ್ ರೇವೂರ್ - ಬಿಜೆಪಿ
2018 : ದತ್ತಾತ್ರೇಯ ಪಾಟೀಲ್ ರೇವೂರ್ - ಬಿಜೆಪಿ
ಇದನ್ನೂ ಓದಿ: ಯಮಕನಮರಡಿ ಪಟ್ಟಕ್ಕಾಗಿ ಕಾದಾಟ: ಮುಂದುವರಿಯುತ್ತಾ ಸತೀಶ್ ಜಾರಕಿಹೊಳಿ ಗೆಲುವಿನ ನಾಗಾಲೋಟ?