ಕಲಬುರಗಿ: ಕಲಬುರಗಿಯಲ್ಲಿ ಕೃಷಿ ಪತ್ತಿನ ಇಬ್ಬರು ಕಾರ್ಯದರ್ಶಿಗಳು ರೈತರಿಗೆ ಗೊತ್ತಿಲ್ಲದೆ ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಮೋಸ ಮಾಡಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಯಲಗೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ರಾಯಪ್ಪಗೌಡ ಮೇಲೆ ರೈತರಿಗೆ ಮೋಸ ಮಾಡಿದ ಆರೋಪವಿದೆ.
ಕಾರ್ಯದರ್ಶಿ ರಾಯಪ್ಪಗೌಡ ನೂರಾರು ರೈತರ ಹೆಸರಿನಲ್ಲಿ ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಖಾತೆಗಳನ್ನು ತೆರೆದು ಬೆಳೆಸಾಲ, ಬೆಳೆ ವಿಮೆ, ಸಾಲ ಮನ್ನಾ ಹಣವನ್ನು ಲಪಟಾಯಿಸಿದ್ದಾರಂತೆ. ಇದನ್ನು ತಿಳಿದ ನೂರಾರು ರೈತರು ರೊಚ್ಚಿಗೆದ್ದು ಜೇವರ್ಗಿ ಪಟ್ಟಣದಲ್ಲಿ ಸಿಕ್ಕ ಕಾರ್ಯದರ್ಶಿ ರಾಯಪ್ಪಗೌಡಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ರೈತರಿಗೆ ಮಾಹಿತಿ ಇಲ್ಲದೆ ಅವರ ಪಹಣಿ, ಆಧಾರ ಕಾರ್ಡ್ ಬಳಸಿ ರೈತರ ಹೆಸರಿನಲ್ಲಿ ನಕಲಿ ಅಕೌಂಟ್ ಓಪನ್ ಮಾಡಿ ಮೂರ್ನಾಲ್ಕು ವರ್ಷಗಳಿಂದ ಕಾರ್ಯದರ್ಶಿ ರಾಯಪ್ಪಗೌಡ ಮೋಸ ಮಾಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡ್ತಿರುವ ರೈತರು, ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ.
ಯರಗೋಡ ಕಾರ್ಯದರ್ಶಿ ಮಾತ್ರವಲ್ಲ, ಜೇವರ್ಗಿ ತಾಲ್ಲೂಕಿನ ಹೊನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಪರಶುರಾಮ ಕೂಡ ಇದೇ ರೀತಿ ರೈತರ ಹೆಸರಿನಲ್ಲಿ ಫೇಕ್ ಅಕೌಂಟ್ಗಳನ್ನು ಸೃಷ್ಟಿ ಮಾಡಿಕೊಂಡು ನಿರಂತರವಾಗಿ ಮೋಸ ಮಾಡ್ತಿದ್ದಾರೆಂದು ಆರೋಪಿಸಲಾಗಿದೆ.
ಕೃಷಿ ಪತ್ತಿನ ಸಂಘಗಳ ವ್ಯಾಪ್ತಿಯ ಹೊನ್ನಾಳ, ರಾಂಪೂರ, ಬೀರಾಳ ಕೆ.ಬೀರಾಳ ಬಿ, ಮಲ್ಲಾ ಕೆ, ಮಲ್ಲಾ ಬಿ. ಹೋತಿನಮಡು, ಯಲಗೋಡ, ಆಂದೋಲಾ ಸೇರಿ ಹತ್ತಾರು ಹಳ್ಳಿಗಳ ನೂರಾರು ರೈತರ ಹೆಸರಿನಲ್ಲಿ ಫೇಕ್ ಅಕೌಂಟ್ ತೆರೆದು ಇಬ್ಬರು ಕಾರ್ಯದರ್ಶಿಗಳು ಮೋಸ ಮಾಡಿದ್ದಾರೆಂದು ರೈತರು ಹೇಳುತ್ತಿದ್ದಾರೆ. ಈ ಕುರಿತಾಗಿ ನೂರಾರು ರೈತರು, ಕಲಬುರಗಿ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಡಿಸಿಸಿ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.