ಕಲಬುರಗಿ: ಬಿಜೆಪಿ ಪಕ್ಷಕ್ಕೆ ಉಮೇಶ್ ಜಾಧವ್ ಸೇರ್ಪಡೆಗೊಂಡ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ ಹಿರಿಯ ನಾಯಕ ಮಾಜಿ ರಾಜ್ಯಸಭಾ ಸದಸ್ಯ ಕೆ .ಬಿ. ಶರಣಪ್ಪ ಬಿಜೆಪಿ ಪಕ್ಷ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ ಸೇರಿದಂತೆ ಬಿಜೆಪಿ ಹಿರಿಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಿರಿಯ ನಾಯಕರು ಡಿಕ್ಟೇಟರ್ ರೀತಿ ವರ್ತಿಸುತ್ತಿದ್ದಾರೆ. ಸ್ಥಳೀಯ ನಾಯಕರನ್ನು ಗಣನೆಗೆ ತೆಗೆದುಕೊಳ್ಳದೆ ರಾಜ್ಯ ನಾಯಕರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದು ಬಿಜೆಪಿಯಲ್ಲಿ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿದೆ.
ಕೆಜೆಪಿಗೆ ಹೋಗಿ ಮತ್ತೆ ಬಿಜೆಪಿಗೆ ವಾಪಸ್ಸಾಗಿರುವ ಯಡಿಯೂರಪ್ಪಗೆ ಪಕ್ಷ ಮುನ್ನಡೆಸುವ ನೈತಿಕತೆ ಇಲ್ಲ. ಪದೇ ಪದೇ ನನ್ನನ್ನು ಕಡೆಗಣಿಸುತ್ತಾ ಹಂತಹಂತವಾಗಿ ತುಳಿಯುತ್ತ ಬರುತ್ತಿದ್ದಾರೆ. ನನ್ನನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವಾಗಲೂ ಯಡಿಯೂರಪ್ಪ ವಿರೋಧಿಸಿದರು. ವಿಧಾನಸಭಾ ಸದಸ್ಯರನ್ನಾಗಿ ನೇಮಕ ಮಾಡುವಾಗಲು ವಿರೋಧಿಸಿದರು. ವಿಧಾನಸಭೆ ಉಪಸಭಾಪತಿ ಮಾಡಿದಾಗ ಕೆಲವೇ ದಿನಗಳಲ್ಲಿ ಆ ಸ್ಥಾನಕ್ಕೆ ಬೇರೆಯವರನ್ನು ಕೂಡಿಸಿದರು. ಬಿಜೆಪಿಯಲ್ಲಿ ಹಿರಿಯ ನಾಯಕರಿಗೆ ಬೆಲೆ ಇಲ್ಲದಂತಾಗಿದೆ ಎಂದು ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸ್ಥಳೀಯ ನಾಯಕರನ್ನು ಕಡೆಗಣಿಸಲಾಗಿದೆ. ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕಾಗಿ ದುಡಿದವರ ಗತಿ ಏನು? ಕಾಂಗ್ರೆಸ್ ನಿಂದ ಬಂದ ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್ ಅವರಿಗೆ ಏನು ಮಾಡಿದ್ದಾರೆ. ಬರಿ ಪಕ್ಷಕ್ಕೆ ಕರೆತಂದರೆ ಸಾಲದು ಅವರನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳುವುದು ಕಲಿಬೇಕು. ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಹಿನ್ನೆಲೆ ನಾಮಕಾವಾಸ್ತೆ ನಾಯಕರಾಗಿ ಇಲ್ಲಿ ಉಳಿಯೋಕೆ ಮನಸ್ಸಿಲ್ಲ, ಯಡಿಯೂರಪ್ಪ ಅವರ ಸರ್ವಾಧಿಕಾರಿ ಧೋರಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಉಮೇಶ್ ಜಾಧವ್ ಅವರಿಗೆ ಟಿಕೆಟ್ ನೀಡುತ್ತಿರುವ ಹಿನ್ನೆಲೆ ತಾವು ಬಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದರು.
ಇನ್ನೊಬ್ಬ ಬಿಜೆಪಿ ಹಿರಿಯ ನಾಯಕ ಶಾಮರಾವ್ ಫ್ಯಾಟಿ ಕೂಡ ತಮ್ಮ ಬಿಜೆಪಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು. ಇನ್ನೂ ಹಲವು ನಾಯಕರು ಬಿಜೆಪಿಗೆ ಇಷ್ಟರಲ್ಲಿ ರಾಜೀನಾಮೆ ನೀಡಲಿದ್ದು, ಸಮಾನ ಮನಸ್ಕರು ಕೂಡಿ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಕೆ ಬಿ ಶಾಣಪ್ಪ ತಿಳಿಸಿದರು.