ಕಲಬುರಗಿ: ಯಾದಗಿರಿ, ವಿಜಯಪುರ, ಕಲಬುರಗಿ ಮೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ಎದುರಿಸುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಒಂದು ವರ್ಷ ಕಾಲ ಗಡಿಪಾರು ಮಾಡಿ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್ ರವಿಕುಮಾರ ಆದೇಶ ಹೊರಡಿಸಿದ್ದಾರೆ.
ಅಕ್ರಮ ಪಡಿತರ ಅಕ್ಕಿ ಸಾಗಣೆ, ಜೀವ ಬೆದರಿಕೆ ಹಾಕಿರುವುದು ಸೇರಿದಂತೆ ಮೂರು ಜಿಲ್ಲೆಗಳ ಹಲವಡೆ ವಿವಿಧ ಪ್ರಕರಣಗಳನ್ನು ಮಣಿಕಂಠ ರಾಠೋಡ ಎದುರಿಸುತ್ತಿದ್ದಾರೆ. ಕೋರ್ಟ್ನಲ್ಲಿ ಜಾಮೀನು ಪಡೆದು ಹೊರಬಂದ ನಂತರವು ಮತ್ತೆ ಹಳೆ ಚಾಳಿ ಮುಂದುವರೆಸಿದ್ದರು. ಇವರನ್ನು ಗಡಿಪಾರು ಮಾಡಬೇಕೆಂದು ಹಲವು ದಿನಗಳಿಂದ ಸಂಘಟನೆಗಳು ಆಗ್ರಹಿಸಿದ್ದವು.

ಐದು ದಿನ ಕಾಲಾವಕಾಶ: ಇತ್ತೀಚೆಗೆ ಎಡಿಜಿಪಿ ಅಲೋಕ್ ಕುಮಾರ್ ಕಲಬುರಗಿ ನಗರಕ್ಕೆ ಆಗಮಿಸಿದಾಗ ದಲಿತ ಸಂಘಟನೆ ಮುಖಂಡರು ಮಣಿಕಂಠ ರಾಠೋಡ ಗಡಿಪಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಲಬುರಗಿಯಿಂದ ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಗೆ ಒಂದು ವರ್ಷ ಕಾಲ ಗಡಿಪಾರು ಮಾಡಲಾಗಿದೆ. ಸೆ.30 ರಂದು ಆದೇಶ ಹೊರಬಿದ್ದಿದ್ದು, ಗಡಿಪಾರಿಗೆ ಐದು ದಿನ ಕಾಲಾವಕಾಶ ನೀಡಲಾಗಿದೆ.

ಪ್ರಿಯಾಂಕ್ ಖರ್ಗೆ ವಿರುದ್ಧ ಫೈಟ್: ಮಣಿಕಂಠ ಠಾಠೋಡ ರಾಜಕೀಯವಾಗಿ ಬೆಳೆಯಲು ಬಿಜೆಪಿ ನಾಯಕರ ಆಶೀರ್ವಾದ ಇತ್ತು ಎನ್ನಲಾಗ್ತಿದೆ. ಇದಕ್ಕೆ ಪೂರಕ ಎಂಬಂತೆ ಮಣಿಕಂಠ ತಮ್ಮ ಫೇಸ್ಬುಕ್ ಖಾತೆಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿ ಅನೇಕ ನಾಯಕರ ಜೊತೆಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಿತ್ತಾಪುರ ಮತ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಠಾಠೋಡ ಸಮಯ ಸಿಕ್ಕಾಗಲೆಲ್ಲ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಕೆಲ ಸಂದರ್ಭಗಳಲ್ಲಿ ಪ್ರಿಯಾಂಕ್ ಖರ್ಗೆ ಕೂಡಾ ಪ್ರತಿ ವಾಗ್ದಾಳಿ ನಡೆಸಿದ್ದರು.
ಮಣಿಕಂಠ ರಾಠೋಡ ಗಡಿಪಾರು ತಡೆಯಲು ಇವರ ಸಮುದಾಯದ ಕಲಬುರಗಿ ನಾಯಕರೊಬ್ಬರು ಪ್ರಯತ್ನ ಮಾಡಿದ್ದರು ಎನ್ನಲಾಗಿದೆ. ಆದರೂ ಪೊಲೀಸರು ಗಡಿಪಾರು ಮಾಡಿದ್ದಾರೆ. ಬಿಜೆಪಿ ನಾಯಕರ ಕೃಪಾಕಟಾಕ್ಷದಿಂದ ರಾಜಕೀಯವಾಗಿ ಬೆಳೆಯುತ್ತಿದ್ದ ಮಣಿಕಂಠ ಈಗ ಗಡಿಪಾರು ಆಗುವಂತಾಗಿದೆ.
ಇದನ್ನೂ ಓದಿ: ಕಾನೂನು ಬಾಹಿರ ಕೃತ್ಯ: ಕೊಪ್ಪಳದ ವ್ಯಕ್ತಿ ಚಾಮರಾಜನಗರಕ್ಕೆ ಗಡಿಪಾರು