ರಾಣೆಬೆನ್ನೂರು: ನಗರದ ಶನೈಶ್ಚರ ದೇವಾಲಯದ 7 ನೇ ವರ್ಷದ ತಿಲಲಕ್ಷದೀಪತ್ಸೋವ ಕಾರ್ಯಕ್ರಮಕ್ಕೆ ಬಾಳೆಹೊನ್ನೂರಿನ ಜಗದ್ಗುರು ಪ್ರಸನ್ನ ರೇಣುಕ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಸನ್ಮಾರ್ಗದಲ್ಲಿ ನಡೆಯಬೇಕಾದರೆ ನಮಗೆ ಸಮರ್ಥ ಗುರುವಿನ ದರ್ಶನವಾಗಬೇಕು ಎಂದು ಅಭಿಪ್ರಾಯಪಟ್ಟರು. ಇಂದು ನಾವೆಲ್ಲರೂ ನಾಸ್ತಿಕರಲ್ಲಿ ಕೂಡ ಆಸ್ತಿಕ ಮನೋಭಾವ ಬೆಳೆಸುವಂತರಾಗಬೇಕು. ಕೆಲವರು ಪವಿತ್ರವಾದ ಧರ್ಮವನ್ನು ಜಾತಿಗೆ ಅಂಟಿಸಿ ಅದನ್ನು ಕಲುಷಿತ ಮಾಡುತ್ತಿದ್ದಾರೆ. ಅದನ್ನು ಸರಿದೂಗಿಸಲು ನಾವುಗಳು ಮಾರ್ಗದರ್ಶಕರಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಇನ್ನು ಅರಳೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಗಚ್ಚಿನಮಠದ ಶಿವಯೋಗಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಠದ ವತಿಯಿಂದ ನೀಡಲಾದ ಮನಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾದ ವಿಶ್ವನಾಥ ಹಿರೇಮಠ ಅವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್.ಎಸ್. ರಾಮಲಿಂಗಣ್ಣನವರ, ಸಿದ್ದಣ್ಣ ಚಿಕ್ಕಬಿದರಿ, ರವಿಂದ್ರಗೌಡ ಪಾಟೀಲ, ನಿತ್ಯಾನಂದ ಸೇರಿದಂತೆ ಇತರರು ಭಾಗವಹಿಸಿದ್ದರು.