ಹಾಸನ/ಬೇಲೂರು: ಗ್ರಾಮಸಭೆಗಳನ್ನು ನಡೆಸುವುದರಿಂದ ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ ಬಾಂಧವ್ಯ ವೃದ್ಧಿಗೆ ಸಹಕಾರವಾಗಲಿದೆ ಎಂದು ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಆಯೋಜಿಸಿದ್ದ ಗ್ರಾಮಸಭೆಯನ್ನ ಉದ್ಘಾಟಿಸಿ ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದಾಗಿ ಜನಪ್ರತಿನಿಧಿಗಳೇ ಗುರುತಿಸಿ ಪರಿಹರಿಸಲು ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿ ಮಟ್ಟಕ್ಕೆ ಜನರು ತಮ್ಮ ತಮ್ಮ ಸಮಸ್ಯೆಗಳನ್ನ ಹೊತ್ತು ತಂದಾಗ ಮಾತ್ರ ಅದು ಆಯಾ ಕ್ಷೇತ್ರದ ಸದಸ್ಯರು ಮತ್ತು ಶಾಸಕರ ಗಮನಕ್ಕೆ ಬಂದು ಸಮಸ್ಯೆಗೆ ಒಂದು ಸೂಕ್ತ ಪರಿಹಾರ ಒದಗಿಸಲು ಸಾಧ್ಯ. ಈ ಉದ್ದೇಶದಿಂದಲೇ ನಾನು ನನ್ನ ಹಲವು ಕೆಲಸಗಳ ಒತ್ತಡಗಳ ನಡುವೆಯೂ ಖುದ್ದಾಗಿ ಗ್ರಾಮಸಭೆಗೆ ಹಾಜರಾಗುತ್ತೇನೆ. ಸಾರ್ವಜನಿಕರಿಂದ ಸ್ವೀಕರಿಸುವಂತಹ ಯಾವುದೇ ಅರ್ಜಿಗಳನ್ನು ತಿರಸ್ಕರಿಸದೆ ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಸೂಚಿಸಿರುವುದಾಗಿ ಶಾಸಕರು ತಿಳಿಸಿದರು.
ಅರೇಹಳ್ಳಿ ಭಾಗದಲ್ಲಿ ಹೆಚ್ಚಿನ ಸಮಸ್ಯೆ ಇರುವುದು ನಿವೇಶನ ಹಾಗೂ ಆಸ್ತಿಗಳ ಸರಿಯಾದ ದಾಖಲಾತಿ ಇಲ್ಲದಿರುವುದು. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಹಾಗೂ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಿ ಕಾರ್ಯ ನಿರ್ವಹಿಸುತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅದು ಸರಿಯಾಗಲಿದೆ ಎಂದು ಬೇಲೂರು ನಟೇಶ್ ತಹಶೀಲ್ದಾರ್ ಹೇಳಿದರು.