ಹಾಸನ: ಸಣ್ಣ ಕೈಗಾರಿಕೆಗಳ ವಿವಿಧ ಸಮಸ್ಯೆ ಬಗೆಹರಿಸಿಕೊಡುವಂತೆ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದಿಂದ ಕೆ.ಐ.ಎ.ಡಿ.ಬಿ. ಅಭಿವೃದ್ಧಿ ಅಧಿಕಾರಿ ಜಗದೀಶ್ ರವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಡೈರಿ ವೃತ್ತದ ಬಳಿ ಬಿ. ಕಾಟೀಹಳ್ಳಿಯಲ್ಲಿರುವ ಕೈಗಾರಿಕಾ ಭವನದಲ್ಲಿ ಸಣ್ಣ ಕೈಗಾರಿಕೆಗಳ ಕುಂದು ಕೊರತೆಗಳ ಸಭೆಯಲ್ಲಿ ಸಂಘದ ಅಧ್ಯಕ್ಷ ಎನ್. ವಿಶ್ವನಾಥ್ ಮಾತನಾಡಿ, ಕೈಗಾರಿಕಾ ವಲಯವು ಜಿಲ್ಲೆಗೆ ಬಹಳ ಹಳೆಯ ಹಾಗೂ ಉತ್ತಮ ಕೈಗಾರಿಕಾ ವಲಯವಾಗಿದೆ. ಬಹಳಷ್ಟು ಎಮ್.ಎಸ್.ಎಂ.ಇ. ಘಟಕಗಳು ಜಿಲ್ಲೆಯಲ್ಲಿದ್ದು, ಇಲ್ಲಿನ ಸುತ್ತಮುತ್ತಲಿನ ಜನರು ಕೈಗಾರಿಕೆಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಕೈಗಾರಿಕಾ ವಲಯದಲ್ಲಿನ ಉತ್ಪನ್ನಗಳು ಇಡೀ ರಾಜ್ಯದಲ್ಲೇ ಹೆಸರುವಾಸಿಯಾಗಿವೆ ಎಂದರು.
ಕೈಗಾರಿಕಾ ವಲಯವು ಪಂಚಾಯಿತಿಗೆ ಸೇರಿರುವುದರಿಂದ ಕಂದಾಯವನ್ನು ಅಲ್ಲೇ ಪಾವತಿಸಲಾಗುತ್ತಿದೆ. ಪ್ರಪಂಚದಾದ್ಯಂತ ಹರಡಿರುವ ಮಹಾಮಾರಿ ಕೊರೊನಾ ಕಾಯಿಲೆಯಿಂದ ಎಮ್.ಎಸ್.ಎಂ.ಇ. ಘಟಕಗಳಿಗೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಸಮಸ್ಯೆಗಳು ಎದುರಾಗಿದ್ದು, ಇದರಿಂದ ಕೈಗಾರಿಕಾ ಕುಟುಂಬಗಳಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಣ್ಣ ಕೈಗಾರಿಕೆಗಳ ಕಂದಾಯ ಕಳೆದ ಬಾರಿಗಿಂತ ಶೇ.11ರಷ್ಟು ದುಪ್ಪಟ್ಟು ಏರಿಕೆ ಮಾಡಲಾಗಿದೆ. ಅದರಲ್ಲಿ ಘಟಕಗಳ ವಿಸ್ತೀರ್ಣಕ್ಕೆ ಕಂದಾಯ ಹಾಕಲಾಗುತ್ತಿದೆ. ಸರ್ಕಾರದ ಸುತ್ತೋಲೆಯಂತೆ ಗಾರ್ಡನ್ ಏರಿಯಾ ಮತ್ತು ಸಾರ್ವಜನಿಕ ಉಪಯೋಗಗಳಿಗೆ ವಿನಾಯತಿ ನೀಡಿದ್ದರೂ ಸಹ ಪರಿಗಣಿಸುತ್ತಿಲ್ಲ, ಆದ್ದರಿಂದ ಈ ಕೂಡಲೇ ಕಂದಾಯದಲ್ಲಿ ಪರಿಷ್ಕರಣೆ ಮಾಡಿ ವಿನಾಯಿತಿ ಮಾಡಿಕೊಡಬೇಕು ಎಂದರು.
ಕೈಗಾರಿಕಾ ವಲಯದಲ್ಲಿ ಹಲವಾರು ಬಡ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರ ಆರೋಗ್ಯದ ದೃಷ್ಠಿಯಿಂದ ಶುದ್ಧ ನೀರಿನ ಘಟಕವನ್ನು ಕೈಗಾರಿಕಾ ವಲಯದಲ್ಲಿ ಸ್ಥಾಪಿಸಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದರು.